ಸುರತ್ಕಲ್: ಡಿ.23-24ರಂದು ಎನ್ಐಟಿಕೆ ಹಳೆ ವಿದ್ಯಾರ್ಥಿ ಸಂಘದಿಂದ 14ನೇ ಜಾಗತಿಕ ಸಮ್ಮೇಳನ
ಮಂಗಳೂರು, ಡಿ.20: ಸುರತ್ಕಲ್ನ ಎನ್ಐಟಿಕೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 14ನೇ ಜಾಗತಿಕ ಸಮ್ಮೇಳನ ಡಿ. 23ಮತ್ತು 24ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಮ್ಮೇಳನದ ಸಂಚಾಲಕ ವಿಠಲ್ ಬಿ. ಪರ್ವತಿಕಾರ್, 2020ರಲ್ಲಿ ಸಂಘದ ವಜ್ರ ಮಹೋತ್ಸವದ ಅಂಗವಾಗಿ ಎನ್ಐಟಿಕೆಯ ಕ್ಯಾಂಪಸ್ನಲ್ಲಿ ಈ ಜಾಗತಿಕ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸುಮಾರು 600ರಷ್ಟು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರೊ. ತ್ರಿಲೋಚನ್ ಶಾಸ್ತ್ರಿ, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಡಿ. 23ರಂದು ಬೆಳಗ್ಗೆ 10.15ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಘದ ಜಾಗತಿಕ ಅಧ್ಯಕ್ಷ ಕೀರ್ತಿರಾಜ್ ಸಾಲಿಯಾನ್ ದಿಕ್ಸೂಚಿ ಭಾಷಣ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ 1965ನೇ ಪ್ರಥಮ ಬ್ಯಾಚ್ನ ಪದವೀಧರು ಸೇರಿದಂತೆ ಇತರರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಡಿ. 24ರಂದು ಸಂಜೆ 4ಗಂಟೆಗೆ ಸಮಾರೋಪ ನಡೆಯಲಿದ್ದು, ಈ ಸಂದರ್ಭ ವಿವಿಧ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎನ್ಐಟಿಕೆ ಹಳೆ ವಿದ್ಯಾರ್ಥಿಗಳಾದ ಅಜಿತ್ ಕರ್ವಾಕರ್, ವಿಷ್ಣುದಾಸ್ ಪೈ, ಎನ್ಐಟಿಕೆಯ ಪ್ರೊ. ಅರುಣ್ ಎಂ. ಇಸ್ಲೂರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ವೈಷ್ಣವಿ ಉಪಸ್ಥಿತರಿದ್ದರು.