ಕಾಸರಗೋಡು | ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ: 40ಕ್ಕೂ ಅಧಿಕ ಮಂದಿಗೆ ಗಾಯ
ಕಾಸರಗೋಡು: ಮೈಸೂರಿನಿಂದ ಕೇರಳಕ್ಕೆ ಪ್ರವಾಸಕ್ಕೆ ಹೊರಟಿದ್ದ ಬಸ್ಸೊಂದು ಪನತ್ತಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಮಗುಚಿ ಬಿದ್ದ ಪರಿಣಾಮ 40ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯಿಂದ ಗಾಯಗೊಂಡವರನ್ನು ಪೂಡಂಕಲ್ಲು ತಾಲೂಕು ಆಸ್ಪತ್ರೆ ಹಾಗೂ ಕಾಞ೦ಗಾಡ್ ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೈಸೂರಿನ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನ ಸಿಬಂದಿಗಳು ಕೇರಳದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಬಸ್ಸಿನಲ್ಲಿ 49 ಮಂದಿ ಪ್ರಯಾಣಿಕರಿದ್ದರೆನ್ನಲಾಗಿದೆ. ಬಸ್ಸಿನಲ್ಲಿ ಸಿಲುಕಿದವರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಯಿತು.