ಆ.21 ರಿಂದ ಜಮಾಅತೆ ಇಸ್ಲಾಮೀ ಹಿಂದ್ನಿಂದ ‘ಶಾಂತಿ ಮತ್ತು ಮಾನವೀಯತೆ’ ರಾಷ್ಟ್ರೀಯ ಅಭಿಯಾನ
ಮಂಗಳೂರು, ಆ. 18: ಜಮಾಅತೆ ಇಸ್ಲಾಮೀ ಹಿಂದ್ ನಿಂದ ಆ.21 ರಿಂದ ಸೆ. 4 ರವರೆಗೆ ಶಾಂತಿ ಮತ್ತು ಮಾನವೀಯತೆ ರಾಷ್ಟ್ರೀಯ ಅಭಿಯಾನ ನಡೆಯಲಿದೆ ಎಂದು ರಾಷ್ಟ್ರೀಯ ಅಭಿಯಾನದ ಶಾಂತಿ ಮತ್ತು ಮಾನವೀಯತೆ ಅಭಿಯಾನದ ದ.ಕ ಜಿಲ್ಲಾ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ.ಸತ್ಯನಾರಾಯಣ ಮಲ್ಲಿಪಟ್ಣ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮನುಷ್ಯ ಮನುಷ್ಯರ ನಡುವಿನ ಸಂಬಂಧಕ್ಕೆ ಬೆಲೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ 15 ದಿನಗಳ ಅಭಿಯಾನದ ಮುಖಾಂತರ ಸಾಮರಸ್ಯ, ಭ್ರಾತ್ವತ್ವ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಅಭಿಯಾನದಲ್ಲಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೈಯಕ್ತಿಕವಾಗಿ ಭೇಟಿ ಮಾಡಿ ಸಾಮರಸ್ಯದ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಲಾಗುವುದು, ಸಾಮರಸ್ಯದ ಕುರಿತಾದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗುವುದು, ಹೈಸ್ಕೂಲ್, ಕಾಲೇಜುಗಳಲ್ಲಿ ಭಾಷಣ, ಚರ್ಚೆ, ಪ್ರಬಂಧಸ್ಪರ್ಧೆ ಆಯೋಜಿಸಲಾಗುವುದು, ಸಾಕ್ಷಚಿತ್ರ ನಿರ್ಮಾಣ ಮಾಡಿ ಪ್ರದರ್ಶಿಸುವುದು, ಬೀದಿ ನಾಟಕ ಆಯೋಜಿಸಿ ಸಾಮರಸ್ಯ ಮೂಡಿಸುವ ಪ್ರಯತ್ನ, ಮಕ್ಕಳಲ್ಲಿ ಸಾಮರಸ್ಯ ಬಿತ್ತಲು ಮಕ್ಕಳ ರ್ಯಾಲಿ ಆಯೋಜನೆ, ಬಹುಭಾಷ ಕವಿಗೋಷ್ಟಿ, ಸದ್ಭಾವನ ಪುರಸ್ಕಾರ ನೀಡಲಾಗುವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಆ.30 ರಂದು ಸಂಜೆ 4 ಗಂಟೆಗೆ ಈ ವಿಚಾರದಲ್ಲಿ ವಿಚಾರಗೋಷ್ಠಿಯನ್ನು ಪುರಭವನದಲ್ಲಿ ಆಯೋಜಿಸಲಾಗುವುದು. ಈ ವಿಚಾರದ ಬಗ್ಗೆ ಮುಂದೆ ಗ್ರಾಮ ಮಟ್ಟದಲ್ಲಿಯೂ ಅಭಿಯಾನವನ್ನು ನಡೆಸಲಾಗುವುದು ಎಂದು ಹೇಳಿದರು.
ಎಲ್ಲಾ ಕಡೆಗೆ ದ.ಕ ಜಿಲ್ಲೆಯ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಆದರೆ ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಭೆಗಳಿಂದ ಜಿಲ್ಲೆಗೆ ಹಿನ್ನಡೆಯಾಗಿದೆ. ಈ ವಾತಾವರಣ ಬದಲಾವಣೆ ಮಾಡಿ ಶಾಂತಿ ಸಾಮರಸ್ಯವನ್ನು ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಂತಿ ಮತ್ತು ಮಾನವೀಯತೆ ದ.ಕ ಜಿಲ್ಲಾ ಸ್ವಾಗತ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಕುಂಞಿ, ಉಮರ್ ಯು.ಎಚ್, ಉಪಾಧ್ಯಕ್ಷ ಕೆ.ಸಂಜೀವ ಪೂಜಾರಿ ಉಪಸ್ಥಿತರಿದ್ದರು.