ಭಟ್ಕಳಕ್ಕೆ ಹುಸಿ ಬಾಂಬ್ ಬೆದರಿಕೆ ಪತ್ರ ಪ್ರಕರಣ: ಆರೋಪಿ ಹನುಮಂತಪ್ಪ 4 ದಿನ ಪೊಲೀಸ್ ಕಸ್ಟಡಿಗೆ
ಭಟ್ಕಳ, ಜ.14: ಎರಡು ತಿಂಗಳ ಹಿಂದೆ ಭಟ್ಕಳದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಪೋಸ್ಟ್ ಕಾರ್ಡು ಮೂಲಕ ಬೆದರಿಕೆ ಪತ್ರ ರವಾನಿಸಿದ್ದ ಪ್ರಕರಣದ ಆರೋಪಿ ಬಳ್ಳಾರಿ ಹೊಸಪೇಟೆ ಮೂಲದ ಹನುಮಂತಪ್ಪ(42)ನನ್ನು ನ್ಯಾಯಾಲಯವು 4 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ ಎಂದು ವರದಿಯಾಗಿದೆ.
ಚೆನ್ನೈಯಲ್ಲಿ ಬಂಧಿತನಾದ ಹನುಮಂತಪ್ಪನನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದು ಶುಕ್ರವಾರ ಇಲ್ಲಿನ ಸರಕಾರಿ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನವೆಂಬರ್ 11ರಂದು ಭಟ್ಕಳ ಪೊಲೀಸ್ ಠಾಣೆಗೆ ಬಂದಿದ್ದ ಬೇನಾಮಿ ಅಂಚೆ ಪತ್ರವೊಂದರಲ್ಲಿ ಉರ್ದು ಮತ್ತು ಅಂಗ್ಲ ಭಾಷೆಯಲ್ಲಿ ಭಟ್ಕಳಕ್ಕೆ ಬಾಂಬ್ ಹಾಕುವುದಾಗಿ ಬೆದರಿಸಲಾಗಿತ್ತು.
ಜ.5ರಂದು ಪತ್ರದ ಮೂಲಕ ಬೆದರಿಕೆಯೊಡ್ಡಿದ ವ್ಯಕ್ತಿಯ ವಿರುದ್ಧ ದೂರನ್ನು ದಾಖಲಿಸಿಕೊಂಡಿದ್ದ ಭಟ್ಕಳ ಸಿಪಿಐ ದಿವಾಕರ್ ಪಿ.ಎಂ. ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಯು ಬೆದರಿಕೆ ಪೋಸ್ಟ್ ಕಾರ್ಡ್ ಅನ್ನು ಧರ್ಮಸ್ಥಳದಿಂದ ಪೋಸ್ಟ್ ಮಾಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.