ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮೂಲಭೂತ ಜ್ಞಾನ ಅಗತ್ಯ: ಫ್ರಾನ್ಸಿಸ್ ಅಸ್ಸೀಸಿ ಅಲ್ಮೆಡಾ
ಪುತ್ತೂರು, ಆ.30: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಯೋಜನಾ ಬದ್ಧ ಅಧ್ಯಯನ ಮತ್ತು ದೃಢಸಂಕಲ್ಪದಿಂದ ವಿವಿಧ ರೀತಿಯ ನಾಗರಿಕಾ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಪ್ರತಿಷ್ಠಿತ ಆಡಳಿತಾತ್ಮಕ ಸೇವೆಯಲ್ಲಿ ಪ್ರವೇಶ ಪಡೆಯುವ ಗುರಿಯನ್ನು ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಮೂಲಭೂತ ಜ್ಞಾನದ ಅಗತ್ಯವಿದೆ ಎಂದು ಮರೀಲ್ ಸೇಕ್ರೆಡ್ ಹಾರ್ಟ್ ಚರ್ಚ್ನ ಧರ್ಮಗುರು ಫ್ರಾನ್ಸಿಸ್ ಅಸ್ಸೀಸಿ ಅಲ್ಮೆಡಾ ಹೇಳಿದರು.
ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದಿವ್ಯ ಚೇತನ ಸಂಘದ ಆಶ್ರಯದಲ್ಲಿ ಸೋಮವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ನಾಗರಿಕಾ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉತ್ತಮ ಪೂರ್ವ ತಯಾರಿಯ ಅಗತ್ಯವಿದೆ. ಆರಂಭದಲ್ಲಿ ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ ತೇರ್ಗಡೆ ಹೊಂದಿದವರು ಮುಖ್ಯ ಪರೀಕ್ಷೆಗಳಿಗೆ ಹಾಜರಾಗಬೇಕು. ನಂತರ ಸಂದರ್ಶನವನ್ನು ನಡೆಸಿ, ಅರ್ಹ ಅ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿಯ ವಿವಿಧ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಎಲ್ಲಾ ವಿಷಯಗಳ ಮೂಲಭೂತ ಜ್ಞಾನದ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ ಮಾತನಾಡಿ, ವಿದ್ಯಾರ್ಥಿಗಳು ಐಎಎಸ್, ಐಪಿಎಸ್ಗಳಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವ ಗುರಿಯನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ನುರಿತ ತರಬೇತುದಾರರ ಮಾರ್ಗದರ್ಶನ, ವಿಷಯದ ಕುರಿತು ಉತ್ತಮ ಜ್ಞಾನ, ಆತ್ಮವಿಶ್ವಾಸ, ಸಮಯದ ನಿರ್ವಹಣೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ವಿನೋಲಿಯ ಮಿನೇಜಸ್ ಮತ್ತು ತಂಡದವರು ಪ್ರಾರ್ಥಿಸಿದರು. ವಿಲ್ಮಾ ಲೋಬೊ ಸ್ವಾಗತಿಸಿ, ಎಲ್ವಿಟಾ ಡಿಸೋಜ ವಂದಿಸಿದರು. ಆ್ಯರಲ್ ಲೋಬೊ ಕಾರ್ಯಕ್ರಮ ನಿರೂಪಿಸಿದರು. ದಿವ್ಯ ಚೇತನ ಸಂಘದ ನಿರ್ದೇಶಕ ನೋವ್ಲಿನ್ ಡಿಸೋಜ ಮತ್ತು ವಿಯೋಲ ಪಿರೇರಾ ಕಾರ್ಯಕ್ರಮ ನಿರೂಪಿಸಿದರು.