ಶಾಂತಿ, ಮಾನವೀಯತೆ ಅಭಿಯಾನ: ಕಿರು ವೀಡಿಯೊ ಚಿತ್ರ ಸ್ಪರ್ಧೆ
ಮಂಗಳೂರು, ಸೆ.25: ಶಾಂತಿ ಮತ್ತು ಮಾನವೀಯತೆ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಅಭಿಯಾನದ ದ.ಕ. ಜಿಲ್ಲಾ ಸ್ವಾಗತ ಸಮಿತಿಯು ಜಿಲ್ಲಾ ಮಟ್ಟದ ಕಿರು ವೀಡಿಯೊ ಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ದ.ಕ. ಜಿಲ್ಲೆಯ ಯುವಕ, ಯುವತಿ, ವಿದ್ಯಾರ್ಥಿ, ಯುವ ಸಂಘಟನೆ, ಮಾಧ್ಯಮ ಕೇಂದ್ರಿತ ಕಾಲೇಜು ಅಥವಾ ಇತರ ಕಾಲೇಜುಗಳು ಈ ಸ್ಫರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, 15,000 ರೂ. ಪ್ರಥಮ ಮತ್ತು 10,000ರೂ. ದ್ವಿತೀಯ ನಗದು ಬಹುಮಾನವಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಹಾಗೂ ಪ್ರಸಾರಕ್ಕೆ ಅರ್ಹವಾಗಿದೆ ಎಂದು ತೀರ್ಪುಗಾರರಿಗೆ ಅನಿಸಿದ ಚಿತ್ರಗಳಿಗೆ ಸಿದ್ಧತಾ ವೆಚ್ಚ ನೀಡಲಾಗುವುದು. ಮೂಕ ಅಥವಾ ಕನ್ನಡ, ಇಂಗ್ಲಿಷ್ ಭಾಷೆಯ ಚಿತ್ರಗಳಿಗೆ ಮಾತ್ರ ಅವಕಾಶವಿದ್ದು, ಚಿತ್ರದ ಅವಧಿ 3 ರಿಂದ 5 ನಿಮಿಷ ಮಾತ್ರವಿರಬೇಕು. ಶಾಂತಿ ಮತ್ತು ಮಾನವೀಯತೆ ಅಭಿಯಾನದ ಆಶಯಗಳಿಗೆ ಪೂರಕವಾದ ಸ್ಪರ್ಧೆಗಾಗಿಯೇ ತಯಾರಿಸಿದ ಸೃಜನಾತ್ಮಕ ಚಿತ್ರಗಳನ್ನು ಮಾತ್ರ ಪರಿಗಣಿಸಲಾಗುವುದು.
ಈಗಾಗಲೇ ಹೆಸರು ನೋಂದಾಯಿಸಿರುವವರನ್ನು ಒಳಗೊಂಡಂತೆ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತರು ತಮ್ಮ ವೀಡಿಯೊ ಚಿತ್ರವನ್ನು ಸಿಡಿ ಅಥವಾ ಡಿವಿಡಿಯಲ್ಲಿ ಬರೆದು ಚಿತ್ರದ ಸಂಪೂರ್ಣ ವಿವರಗಳೊಂದಿಗೆ ಸೆ.29ರ ಒಳಗಾಗಿ ತಲುಪುವಂತೆ ಸ್ವಾಗತ ಸಮಿತಿ, ಶಾಂತಿ ಮತ್ತು ಮಾನವೀಯತೆ ಅಭಿಯಾನ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು - 575001 (ದೂ. ಸಂ. 9845054191)ಇಲ್ಲಿಗೆ ಕಳುಹಿಸುವಂತೆ ಅಭಿಯಾನದ ಸ್ಪರ್ಧಾ ವಿಭಾಗದ ಸಂಚಾಲಕ ಉಮರ್ ಯು.ಎಚ್. ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.