ಕರ್ನಾಟಕ ರಕ್ಷಣಾ ವೇದಿಕೆಯಿಂದ ಧರಣಿ
ಮಂಗಳೂರು, ಸೆ.27: ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಘಟಕದಿಂದ ಜಿಲ್ಲಾಡಳಿತ ಮರಳು ನಿಷೇಧ ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅನಿಲ್ದಾಸ್, ಜಿಲ್ಲೆಯಲ್ಲಿ ರಾಜಕಾರಣಿಗಳ ಕೈಕೆಳಗಿನ ಜನರ ಷಡ್ಯಂತ್ರದಿಂದ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಮರಳು ದಂಧೆ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಮೀರಿ ಬೆಳೆದಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾತನಾಡಿ, ಮರಳು ದಂಧೆ ಜಿಲ್ಲೆಯ ಕೆಲವೇ ಕೆಲವು ಜನರು ಸೃಷ್ಟಿಸಿದ ಮಾಫಿಯವಾಗಿದೆ. ಇದರಿಂದಾಗಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಿದ್ದವರು ಇಂದು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಈ ಸಂದರ್ಭ ಕರಾವೇ ಜಿಲ್ಲಾ ಸಂಚಾಲಕ ತೇಗೂರು ಜಗದೀಶ್ ಅರಸ್, ಸಿವಿಲ್ ಇಂಜಿನಿಯರ್ ಸಂಘದ ಅಧ್ಯಕ್ಷ ವಿನಯ್ ಪೈ, ಮಾಜಿ ಅಧ್ಯಕ್ಷ ವಿಜಯ ವಿಷ್ಣು ಮಯ್ಯ, ಸುನೀಲ್ ಕುಮಾರ್, ದಿನೇಶ್ ಅಡ್ಕ, ಗೋಪಾಲಕೃಷ್ಣ ಭಟ್, ನಝೀರ್ ಬೆಂಗ್ರೆ, ಹೇಮಂತ್ ಮತ್ತಿತರರು ಉಪಸ್ಥಿತರಿದ್ದರು.