ಬೆಳಪು ಸಹಕಾರಿ ಸೇವಾ ಸಹಕಾರಿ ಸಂಘ
ಮೂಳೂರಿನ ಸಹಕಾರಿ ಬಂಧು ಕಟ್ಟಡ ಉದ್ಘಾಟನೆ
ಪಡುಬಿದ್ರೆ, ಅ.2: ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 5ನೆ ಶಾಖೆಯ ನೂತನ ಕಟ್ಟಡ ಸಹಕಾರಿ ಬಂಧು ಉದ್ಘಾಟನೆಯು ರವಿವಾರ ನಡೆಯಿತು. ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ರಾಷ್ಟ್ರಕ್ಕೆ ಮಾದರಿಯಾದ ಬೆಳಪು ಗ್ರಾಮದಲ್ಲಿ ಆರಂಭವಾದ ಸಹಕಾರಿ ಸಂಸ್ಥೆಯು ಸಹಕಾರಿ ತತ್ವದಲ್ಲಿ ಜನರ ಅನುಕೂಲತೆಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆ ಇನ್ನಷ್ಟು ಬೆಳಯಲಿ. ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ತತ್ವದಡಿ ಜನರಿಗೆ ಉತ್ತಮ ಸೇವೆಗಳನ್ನು ಸಹಕಾರಿ ಸಂಸ್ಥೆಗಳು ನೀಡಬೇಕು. ಯಾವುದೇ ಗ್ರಾಹಕನಿಗೂ ಸಾಲ ನೀಡುವಾಗ ಸತಾಯಿಸಬೇಡಿ ಎಂದರು. ಬ್ಯಾಂಕ್ನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಪ್ರಸ್ತುತ ಐದು ಶಾಖೆಗಳನ್ನು ಹೊಂದಿರುವ ಬೆಳಪು ಸಹಕಾರಿ ಸಂಸ್ಥೆ 49ನೆ ವರ್ಷಕ್ಕೆ ಎಲ್ಲೂರಿನಲ್ಲಿ ಸಹಕಾರಿ ಮಿತ್ರ ಎಂಬ ಸ್ವಂತ ಕಟ್ಟಡ, 50ನೆ ವರ್ಷಕ್ಕೆ ಉಚ್ಚಿಲದಲ್ಲಿ ಸಹಕಾರಿ ಮಹಲ್ ಕಟ್ಟಡ ನಿರ್ಮಾಣಗೊಳ್ಳಲಿದೆ. ಈಗಾಗಲೇ 100 ಕೋ.ರೂ. ವ್ಯವಹಾರ ನಡೆಸುತ್ತಿರುವ ಸಂಸ್ಥೆ ಶೇ.18ರಷ್ಟು ಡಿವಿಡೆಂಡ್ ನೀಡುತ್ತಿದೆ ಎಂದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ವೇದ ಮೂರ್ತಿ ಕೇಂಜ ಶ್ರೀಧರ ತಂತ್ರಿ ಶುಭ ಹಾರೈಸಿದರು.
ಶಾಪಿಂಗ್ ಮಾಲ್ನ್ನು ಮಹಾಲಕ್ಷ್ಮೀ ದೇವಳದ ಅರ್ಚಕ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯ, ಗಣಕೀಕರಣವನ್ನು ಮೂಳೂರು ಚರ್ಚನ ಧರ್ಮಗುರು ಜಾನ್ ವೆಸ್ಲಿ ಕುಂದರ್ ಉದ್ಘಾಟಿಸಿದರು. ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ನಾಯ್ಕಾ, ಸಹಕಾರಿ ಸಂಘಗಳ ಸಹಾಯಕ ಉಪನಿಬಂಧಕಿ ಚಂದ್ರ ಪ್ರತಿಮಾ ಲಕ್ಕಿ ಡ್ರಾ ನಡೆಸಿಕೊಟ್ಟರು.
ಮಾಜಿ ಶಾಸಕ ಲಾಲಾಜಿ ಮೆಂಡನ್, ಎಲ್ಲೂರುಗುತ್ತು ಪ್ರಪುಲ್ಲ ಶೆಟ್ಟಿ, ತಾಪಂ ಸದಸ್ಯ ಯು.ಸಿ.ಶೇಖಬ್ಬ, ಕೃಷ್ಣ ಶೆಟ್ಟಿ ಮುಂಬೈ, ಕಾಪು ಪುರಸಭೆ ಅಧ್ಯಕ್ಷೆ ಸೌಮ್ಯಾ, ಮಂಗಳೂರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜೇಶ್ ರಾವ್ ಪಾಂಗಾಳ, ಪಡುಬಿದ್ರಿ ಸಿಎ ಬ್ಯಾಂಕ್ ಅಧ್ಯಕ್ಷ ವೈ ಸುಧೀರ್ ಕುಮಾರ್, ಬೆಳ್ಳೆ ಸಿಎ ಬ್ಯಾಂಕ್ ಅಧ್ಯಕ್ಷ ಶಿವಾಜಿ ಸುವರ್ಣ, ಬ್ಯಾಂಕ್ನ ಪ್ರಬಂಧಕ ರತ್ನಾಕರ ಸೋನ್ಸ್, ಉಪಾಧ್ಯಕ್ಷ ಶ್ರೀವತ್ಸ ರಾವ್, ಹತ್ವಾರಿ ಮೋಹನ್ ರಾವ್, ಎಸ್.ಆರ್.ಬಂಗೇರಾ, ನಿರಂಜನ ಶೆಟ್ಟಿ, ಪಾಂಡು ಶೇರಿಗಾರ್, ಆಲಿಯಬ್ಬ ಬ್ಯಾರಿ, ವೇದಾವತಿ ಕುಂದರ್, ಮೀನಾ ಪೂಜಾರ್ತಿ, ಗೋಪಾಲ್ ಪೂಜಾರಿ, ಅನಿತಾ ಆನಂದ ಉಪಸ್ಥಿತರಿದ್ದರು. ರತ್ನಾಕರ ಸೋನ್ಸ್ ವಂದಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.