ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶ: ಡಾ.ಪ್ರೀತಿ ಕೀರ್ತಿ
ಮುಡಿಪು ಸರಕಾರಿ ಪದವಿ ಕಾಲೇಜಿನಲ್ಲಿ ಕೌಶಲ್ಯ ತರಬೇತಿ ಶಿಬಿರ ಉದ್ಘಾಟನೆ
ಕೊಣಾಜೆ, ಅ.3: ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಉದ್ಯೋಗ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲೇ ಮೈಗೂಡಿಸಿಕೊಂಡಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರೀತಿ ಕೀರ್ತಿ ಡಿಸೋಜ ಹೇಳಿದರು. ಅವರು ಮುಡಿಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉದ್ಯೋಗ ಕೌಶಲ್ಯ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡತ್ತಿದ್ದರು.
ಉತ್ತಮ ಸಂವಹನ, ಸೂಕ್ತ ನಡೆ-ನುಡಿ, ಉಡುಪು, ಆತ್ಮಸ್ಥೈರ್ಯ ಹಾಗೂ ನಿರಂತರ ಪ್ರಯತ್ನಶೀಲತೆಯಿಂದ ಯಾವುದೇ ವಿದ್ಯಾರ್ಥಿ ಉದ್ಯೋಗ ಸಂದರ್ಶನಗಳಲ್ಲಿ ಯಶಸ್ವಿಯಾಗಲು ಹಾಗೂ ಪಡೆದ ಉದ್ಯೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು.
ಉದ್ಯೋಗ ಮಾರ್ಗದರ್ಶನ ಕೋಶದ ಸಂಚಾಲಕ, ಉಪನ್ಯಾಸಕ ನಂದಕಿಶೋರ್ ಎಸ್. ಮಾತನಾಡಿ, ಉದ್ಯೋಗ ಕೌಶಲ್ಯ ತರಬೇತಿಯಡಿಯಲ್ಲಿ ಕಾಲೇಜಿನ ಅಚಿತಿಮ ಪದವಿ ವಿದ್ಯಾರ್ಥಿಗಳಿಗೆ 50 ಗಂಟೆಗಳ ಸರ್ಟಿಫಿಕೆಟ್ ಕೋರ್ಸು ಆಯೋಜಿಸಲಾಗಿದ್ದು, ಈ ತರಬೇತಿಯಲ್ಲಿ ಉದ್ಯೋಗ ಕೌಶಲ್ಯ, ಸಂದರ್ಶನ ಕೌಶಲ್ಯ, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಮತ್ತು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಗಿರಿಧರ್ ರಾವ್ ಎಂ.ಎಸ್. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ಧರು. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಇಸ್ಮಾಯೀಲ್ ಹಾರಿಸ್ ವಂದಿಸಿದರು.