ಅನಧಿಕೃತ ಗ್ಯಾಸ್ ಗೋಡೌನ್ ಮುಚ್ಚಲು ದಸಂಸ ಆಗ್ರಹ
ಪಡುಬಿದ್ರೆ, ಅ.27: ಪಡುಬಿದ್ರೆ ಗ್ರಾಮ ಪಂಚಾಯತ್ನ ಪಾದೆಬೆಟ್ಟು ಗ್ರಾಮದ ದಲಿತ ಕಾಲನಿ ಬಳಿಯ ಅನಧಿಕೃತ ಅಡುಗೆ ಅನಿಲ ದಾಸ್ತಾನು ಕೇಂದ್ರವನ್ನು ತೆರವುಗೊಳಿಸದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ದಸಂಸ ಎಚ್ಚರಿಸಿದೆ.
ಬುಧವಾರ ಪಡುಬಿದ್ರೆಯ ಕಲ್ಲಟ್ಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಪಡುಬಿದ್ರೆ ಗ್ರಾಮ ಶಾಖೆಯ ಸಂಚಾಲಕ ಲೋಕೇಶ್ ಅಂಚನ್, ಪಾದೆಬೆಟ್ಟು ಗ್ರಾಮದ ದಲಿತ ಕಾಲನಿ ಬಳಿ ಅನಧಿಕೃತವಾಗಿ ಗ್ಯಾಸ್ ದಾಸ್ತಾನು ಕೇಂದ್ರವನ್ನು ನಿರ್ಮಿಸಲಾಗಿದೆ. 2011 ರಲ್ಲಿ ನೀಡಿರುವ ಅನುಮತಿ ಕೂಡ ಕಳೆದ ತಿಂಗಳ 30ಕ್ಕೆ ಕೊನೆಗೊಂಡಿರುತ್ತದೆ. ಇದೀಗ ಸುಮಾರು 26 ದಿವಸಗಳಿಂದ ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ. ಇದನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಹಾಗೂ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಈ ಅನಧಿಕೃತ ಗ್ಯಾಸ್ ಸಿಲಿಂಡರ್ ದಾಸ್ತಾನು ಗೋಡೌನನ್ನು ತೆರವುಗೊಳಿಸಬೇಕು. ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ಸಂದರ್ಭ ದಲಿತ ಸಂಘರ್ಷ ಸಮಿತಿಯ ತಾಲೂಕು ಸಹ ಸಂಚಾಲಕ ವಿಠಲ ಮಾಸ್ಟರ್, ಸಹ ಸಂಚಾಲಕ ಸುಕೇಶ್ ಕಲ್ಲಟ್ಟೆ, ಹರೀಶ್ಚಚಂದ್ರ ಕಲ್ಲಟ್ಟೆ, ಸುರೇಶ್ ಪಾದೆಬೆಟ್ಟು, ಗೋಪಾಲ ಸಾಲ್ಯಾನ್, ರವಿ ಪಾದೆಬೆಟ್ಟು ಉಪಸ್ಥಿತರಿದ್ದರು.