ಅಮೆರಿಕ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಗೆಲುವಿಗೆ ಜನಾರ್ದನ ಪೂಜಾರಿ ಪ್ರಾರ್ಥನೆ
ಮಂಗಳೂರು, ನ.6: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಗೆಲುವಿಗೆ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಪೂಜೆಯಲ್ಲಿ ಶ್ರೀ ಕೃಷ್ಣ ಮತ್ತು ಗೋಕರ್ಣನಾಥ ದೇವರಿಗೆ ಪೂಜೆ ಸಲ್ಲಿಸಿ ಗೋಕರ್ಣನಾಥ ಆಡಳಿತ ಮಂಡಳಿ ಪರವಾಗಿ ಪೂಜಾರಿ ಪ್ರಾರ್ಥಿಸಿದರು.
ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಹಿಲರಿ ಸೋತರೆ ಭಾರೀ ಅಪಾಯವಿದೆ. ಅವರು ಗೆದ್ದರೆ ಜಗತ್ತಿಗೆ ಒಳ್ಳೆಯದಾಗಲಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದರೆ ಜಗತ್ತಿಗೆ ತೀವ್ರ ಅಪಾಯವಿದೆ. ಹೈಡ್ರೋಜನ್ ಬಾಂಬ್ ಉಪಯೋಗವಾಗಲಿದೆ. ಇದರಿಂದಾಗಿ ಭಾರತ ಅಪಾಯಕ್ಕೆ ಸಿಲುಕಲಿದೆ. ಈ ಬಗ್ಗೆ ಜಗತ್ತಿನ ಹಲವು ದೇಶ ಆತಂಕದಲ್ಲಿವೆ. ಹಿಲರಿ ಕ್ಲಿಂಟನ್ ಪಾಕಿಸ್ತಾನದ ಪರವಿಲ್ಲ. ಹಿಲರಿ ಕ್ಲಿಂಟನ್ ಗೆದ್ದರೆ ಭಾರತಕ್ಕೆ ತುಂಬಾ ಉಪಯೋಗವಿದೆ. ಈ ಹಿನ್ನೆಲೆಯಲ್ಲಿ ಚರ್ಚ್, ಮಸೀದಿ, ಮಂದಿರಗಳಲ್ಲಿ ಹಿಲರಿ ಗೆಲುಲಿಗಾಗಿ ಪ್ರಾರ್ಥನೆ ನಡೆಯಲಿ ಎಂದು ಜನಾರ್ದನ ಪೂಜಾರಿ ಆಶಿಸಿದರು.