ತಂತ್ರಜ್ಞಾನಕ್ಕಿಂತ ಮಾನವೀಯತೆ ಆಯ್ಕೆ ಮಾಡಿ: ರಾಜೀವ್ ಸೂರಿ ಕರೆ
ಮಣಿಪಾಲ, ನ.21: ತಂತ್ರಜ್ಞಾನಕ್ಕಿಂತಲೂ ಮಾನವೀಯತೆಯನ್ನು ಆಯ್ಕೆ ಮಾಡಿಕೊಳ್ಳಿ ಎಂದು ವಿಶ್ವಖ್ಯಾತಿಯ ನೋಕಿಯಾ ಕಂಪೆನಿಯ ಅಧ್ಯಕ್ಷ ಹಾಗೂ ಸಿಇಒ ರಾಜೀವ್ ಸೂರಿ ಅವರು ಮಣಿಪಾಲ ವಿವಿಯ ಪದವೀಧರ ವಿದ್ಯಾರ್ಥಿ ಗಳಿಗೆ ಕರೆ ನೀಡಿದ್ದಾರೆ.
ಮಣಿಪಾಲದ ಕೆಎಂಸಿ ಗ್ರೀನ್ಸ್ನಲ್ಲಿ ರವಿವಾರ ನಡೆದ ಮಣಿಪಾಲ ವಿವಿಯ 23ನೇ ಘಟಿಕೋತ್ಸವದ ಎರಡನೇ ದಿನದಂದು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ವಿವಿಧ ಪದವಿಗಳನ್ನು ಪಡೆದು ಹೊರಬರುತ್ತಿರುವ ವಿದ್ಯಾರ್ಥಿಗಳು ಸ್ಪಷ್ಟತೆಗಿಂತ ಕುತೂಹಲ, ಏಕರೂಪತೆಗಿಂತ ವೈವಿದ್ಯತೆ, ಶಿಸ್ತಿಗಿಂತ ಆಪ್ತತೆ, ಯಶಸ್ಸಿಗಿಂತ ಗೌರವವನ್ನು ಆಯ್ಕೆ ಮಾಡಿಕೊಳ್ಳಿ ಎಂದವರು ಕರೆ ನೀಡಿದರು.
ತಂತ್ರಜ್ಞಾನಕ್ಕೆ ಅದರದೇ ಆದ ಮಹತ್ವವಿಲ್ಲ. ಜನರ ಉಪಯೋಗಕ್ಕೆ ಬರುವುದು, ಸೇವೆಗೆ ಲಭ್ಯವಿರುವುದೇ ನಿಜವಾದ ತಂತ್ರಜ್ಞಾನ. ಮುಂಬರುವ ದಿನಗಳಲ್ಲಿ ತಂತ್ರಜ್ಞಾನ ಅಟೋಮ್ಯಾಟಿಕ್ ಆಗಿರುವುದು. ಅದು ಸರಳೀಕೃತ ಗೊಂಡಿರುತ್ತದೆ. ನೀವು ಸಮಯವನ್ನು ಜಾಣತನದಿಂದ ಬಳಸಿಕೊಳ್ಳಿ ಎಂದರು.
‘ನಾನು ಮಣಿಪಾಲದ ಎಂಐಟಿಯಲ್ಲಿ ಇಂಜಿನಿಯರಿಂಗ್ ಪದವಿ (1989) ಪಡೆದು ಹೊರಬರುತ್ತಿರುವಾಗ ಪ್ರಪಂಚದಲ್ಲಿ ಭಾರೀ ಬದಲಾವಣೆ ಕಾಣಿಸಿಕೊಂಡಿತ್ತು. ಸೋವಿಯತ್ ರಶ್ಯ ಅದ:ಪತನಗೊಂಡಿತ್ತು. ನಾನು ಮಣಿಪಾಲ ಬಿಡುವಾಗ ಬರ್ಲಿನ್ ಗೋಡೆಯೂ ಕುಸಿದುಬಿದ್ದಿತ್ತು. ವಿಶ್ವದ ಶೀತಲ ಸಮರ ಹೆಚ್ಚುಕಡಿಮೆ ಸಮಾಪ್ತಿಗೊಂಡಿತ್ತು.ಇದರ ಬದಲು ಜಾಗತೀಕರಣ ಹೆಜ್ಜೆಯೂರತೊಡಗಿತ್ತು.’ ಎಂದವರು ನುಡಿದರು.
ಅಂದಿನಿಂದ ಇಂದಿನವರೆಗೆ ಪ್ರಪಂಚದಲ್ಲಿ ತ್ವರಿತಗತಿಯ ಬದಲಾವಣೆ ಗಳಾಗಿವೆ. ಇಂದು ಹಿಂದಿಗಿಂತ ಹೆಚ್ಚೆಚ್ಚು ಮಂದಿ ಹೆಚ್ಚು ಹೆಚ್ಚು ಪ್ರದೇಶಗಳಿಗೆ ಪ್ರಯಾಣಿಸುತಿದ್ದಾರೆ. ಅವಕಾಶಗಳೂ ವಿಪುಲಗೊಂಡಿವೆ. ವಿಮಾನ ಪ್ರಯಾಣ ಹತ್ತಾರು ಪಟ್ಟು ಬೆಳೆದಿದೆ. ಹಿಂದೆ ಅಪರೂಪದ ವಸ್ತುವಾಗಿದ್ದ ಪಾಸ್ಪೋರ್ಟ್ ಇಂದು ಅನಿವಾರ್ಯವೆನಿಸಿಕೊಂಡಿದೆ ಎಂದರು.
ಒಂದೊಮ್ಮೆ ಮೊಬೈಲ್ ಕ್ಷೇತ್ರದಲ್ಲಿ ನೋಕಿಯಾ ಮುಂಚೂಣಿಯಲ್ಲಿತ್ತು. ಮೊಬೈಲ್ ಕ್ಷೇತ್ರದಲ್ಲಿ ಇಂದು ಅದ್ಭುತ ಕ್ರಾಂತಿಯಾಗುತ್ತಿದೆ. ಆರಂಭದಲ್ಲಿ ನೋಕಿಯಾ ಅದರ ಭಾಗವಾಗಿದ್ದರೂ, ಇಂದು ನಾವು ಮತ್ತೊಂದು ಬದಲಾವಣೆಯತ್ತ ಸಾಗುತ್ತಿದ್ದೇವೆ. ಇದನ್ನು ನಾವು ‘ಪ್ರೋಗ್ರಾಮೇಬಲ್ ವರ್ಲ್ಡ್’ ಎಂದು ನೋಕಿಯಾದಲ್ಲಿ ಕರೆಯುತ್ತೇವೆ. ಇದರಿಂದ ಜಗತ್ತಿನ ಸಂಪರ್ಕ ಇನ್ನಷ್ಟು ನಿಕಟವಾಗಲಿದೆ. ಸಂಪರ್ಕವನ್ನು ಬಿಲಿಯನ್ಸ್ನಲ್ಲಿ ಲೆಕ್ಕಮಾಡಲಾಗದು. ಅದನ್ನು ಹತ್ತಾರು ಬಿಲಿಯನ್ಸ್ ಆಗಲಿದೆ. 2025ಕ್ಕೆ ಇದು 100 ಬಿಲಿಯನ್ಸ್ ಗೆ ಸಮೀಪಿಸಲಿದೆ ಎಂದು ರಾಜೀವ್ ಸೂರಿ ನುಡಿದರು.
ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕುಲಪತಿ ಡಾ.ಎಚ್.ವಿನೋದ್ ಭಟ್, ಪ್ರೊ ವೈಸ್ಚಾನ್ಸಲರ್ ಡಾ.ಸುರೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.