ಸಂವಿಧಾನ ದಿವಸ ಆಚರಣೆ ಪ್ರಯುಕ್ತ ರಾಷ್ಟ್ರಮಟ್ಟದ ಸ್ಪರ್ಧೆ
ಮಂಗಳೂರು, ಡಿ.3: ದೇಶದೆಲ್ಲೆಡೆ ಸಂವಿಧಾನ ದಿವಸವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು ಕುರಿತ ಭಾಷಣ ಸ್ಪರ್ಧೆಯನ್ನು ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯೋಜಿಸಲು ಕೇಂದ್ರ ಸರಕಾರವು ನಿರ್ಧರಿಸಿದೆ.
ಈ ಸ್ಪರ್ಧೆಗಳನ್ನು ಸಂಘಟಿಸುವ ಜವಾಬ್ದಾರಿಯನ್ನು ನೆಹರು ಯುವ ಕೇಂದ್ರಕ್ಕೆ ನೀಡಿದ್ದು, ಭಾಷಣ ಸ್ಪರ್ಧೆಯು ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಇರಲಿದೆ.
ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಜೇತರುಗಳಿಗೆ ಬಹುಮಾನ ನೀಡಲಾಗುತ್ತದೆ.
ತಾಲೂಕು ಮಟ್ಟದ ಆಯ್ಕೆ ಪ್ರಕ್ರಿಯೆಯನ್ನು ಡಿ.17ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು. ಇಲ್ಲಿ ಆಯ್ಕೆಗೊಂಡ ಮೂವರು ಡಿ.21ರಂದು ಪೂ.11ಕ್ಕೆ ನೆಹರು ಯುವ ಕೇಂದ್ರ ಸಭಾಂಗಣದಲ್ಲಿ ಜರಗುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗುತ್ತದೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಆಯ್ಕೆಯಾದವರು ಡಿ.23ರೊಳಗೆ ಜರಗುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರು ಜ.14ರಿಂದ 18ರವರೆಗೆ ಹರಿಯಾಣದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಬೇಕಾಗುತ್ತದೆ.