ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಗೆ ಉತ್ತಮ ಹೆಸರಿದೆ-ಈಶ್ವರ ನಾಯ್ಕ
ಭಟ್ಕಳ, ಡಿ.4 : ಭಟ್ಕಳ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ರಾಜ್ಯದಲ್ಲೇ ಉತ್ತಮ ಹೆಸರು ಇದ್ದು ಮುಂದಿನ ದಿನಗಳಲ್ಲಿ ಶೇರುದಾರರು, ಗ್ರಾಹಕರು, ಸಿಬ್ಬಂದಿಗಳ ಸಹಕಾರದಿಂದ ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ರಾಜ್ಯ ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ ಈಶ್ವರನಾಯ್ಕ ಹೇಳಿದರು.
ಅವರು ಪಿಎಲ್ಡಿ ಬ್ಯಾಂಕ್ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಂತ ಮಾಧ್ಯಮ ಪ್ರತಿನಿಧಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ 127 ಕೃಷಿ ಮತ್ತು ಗ್ರಾಮೀಣಾಭಿವದ್ಧಿ ಬ್ಯಾಂಕುಗಳಿದ್ದು ಇವುಗಳಲ್ಲಿ ಭಟ್ಕಳ ಪಿಎಲ್ಡಿ ಬ್ಯಾಂಕು ಆರ್ಥಿಕ ವ್ಯವಹಾರದಲ್ಲಿ ಆಗ್ರ ಸ್ಥಾನವನ್ನು ಹೊಂದಿದೆ.ಬ್ಯಾಂಕು ಕೃಷಿ ಮತ್ತು ಕೃಷಿಯೇತರ ವ್ಯವಹಾರಗಳನ್ನು ಮಾಡುತ್ತಿದ್ದು, ಉತ್ತಮ ಲಾಭ ಕೂಡ ಗಳಿಸುತ್ತಿದೆ.
ಮುಂದಿನ ದಿನಗಳಲ್ಲಿ ಬೇರೆ ತಾಲ್ಲೂಕಿನಲ್ಲೂ ಶಾಖೆ ತೆರೆಯುವ ಕುರಿತು ಚಿಂತನೆ ನಡೆಸಲಾಗಿದೆ. ಬ್ಯಾಂಕು ಈ ಪ್ರಮಾಣದಲ್ಲಿ ಬೆಳೆಯಲು ಶೇರುದಾರರು, ಠೇವಣಿದಾರರು ಮತ್ತು ಗ್ರಾಹಕರ ಉತ್ತಮ ಸಹಕಾರ ಮತ್ತು ಸಿಬ್ಬಂದಿ ವರ್ಗದವರ ಅವಿರತ ಶ್ರಮ ಕಾರಣವಾಗಿದೆ ಎಂದರು.
ಬ್ಯಾಂಕಿನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 24 ಮಂದಿಯನ್ನು ಆಡಳಿತ ಮಂಡಳಿಯವರು ತೆಗೆದು ಹಾಕಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು , ಸಿಬ್ಬಂದಿ ನೇಮಕದ ಬಗ್ಗೆ ವಾರ್ಷಿಕ ಮಹಾಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ತೆಗೆದು ಹಾಕುವಂತೆ ಠರಾವು ಪಾಸಾಗಿತ್ತು ಹಾಗೂ ಸಿಬ್ಬಂದಿ ನೇಮಕಾತಿ ಪಾರದರ್ಶಕವಾಗಿ ಮಾಡುವ ಉದ್ದೇಶದಿಂದ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಮುಂದೆ ಅಗತ್ಯ ಬಿದ್ದರೆ ಮಾತ್ರ ಸಿಬ್ಬಂದಿ ನೇಮಖಾತಿ ಮಾಡಿಕೊಳ್ಳಲಾಗುವುದು ಎಂದರು.
ನೂತನ ಅಧ್ಯಕ್ಷ ದೇವಿದಾಸ ನಾಯ್ಕ ಮಾತನಾಡಿ ಎಲ್ಲರ ಪ್ರೀತಿ, ವಿಶ್ವಾಸ, ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತೇನೆ. ಎರಡು ವರ್ಷದ ಅಧಿಕಾರದ ಅವಧಿಯಲ್ಲಿ ಬ್ಯಾಂಕನ್ನು ಹೆಚ್ಚಿನ ಅಭಿವೃದ್ಧಿ ಪಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕ ಈಶ್ವರ ಎಸ್ ನಾಯ್ಕ, ಉಪಾಧ್ಯಕ್ಷ ಮಹೇಶ ನಾಯ್ಕ, ನಿರ್ದೇಶಕರಾದ ವಿಠಲ್ ನಾಯ್ಕ, ಸುರೇಶ ನಾಯ್ಕ, ಮಂಜುನಾಥ ನಾಯ್ಕ ಜಾಲಿ, ಗಾಯತ್ರಿ ನಾಯ್ಕ, ಮಾಸ್ತಮ್ಮ ನಾಯ್ಕ, ಪ್ರಧಾನ ವ್ಯವಸ್ಥಾಪಕ ವಿ ಎಂ ನಾಯ್ಕ ಉಪಸ್ಥಿತರಿದ್ದರು.