ಮುಲ್ಕಿ ವೈದ್ಯಾಧಿಕಾರಿಯಿಂದ ಧರ್ಮ ನಿಂದನೆ: ಆರೋಪ
ಶವ ಮಹಜರಿಗೆ ವೈದ್ಯಾಧಿಕಾರಿ ನಿರಾಕರಣೆ
ಮುಲ್ಕಿ, ಡಿ.6: ಮುಲ್ಕಿಯ ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಶವದ ಮಹಜರು ನಡೆಸಲು ವಿಳಂಬಿಸಿದ್ದಲ್ಲದೆ, ವಿಚಾ ರಿಸಿದ ಕುಟುಂಬಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಸೋಮವಾರ ಸಂಜೆ ಹಳೆಯಂಗಡಿ ಸಮೀಪದ ಬೊಳ್ಳೂರು ಬಳಿ ನಡೆದ ಬಸ್ ಮತ್ತು ರಿಕ್ಷಾ ಅಪಘಾತದಲ್ಲಿ ರಿಕ್ಷಾ ಚಾಲಕ ಹಳೆಯಂಗಡಿಯ ಇಂದಿರಾ ನಗರದ ನಿವಾಸಿ ಸಾದಿಕ್ ಮೃತ ಪಟ್ಟಿದ್ದರು. ರಾತ್ರಿ ಮೃತದೇಹದ ಮಹಜರು ನಡೆಸಲು ಮುಲ್ಕಿಯ ಸಮದಾಯ ಆರೋಗ್ಯ ಕೇಂದ್ರಕ್ಕೆ ತಂದಿದ್ದರು. ಆ ಸಮಯದಲ್ಲಿ ಟಿ.ವಿ. ನೋಡುತ್ತಾ ಕುಳಿತ್ತಿದ್ದ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಅಜಿತ್ ಶೆಟ್ಟಿ ಬೆಳಗ್ಗೆ 9ಗಂಟೆಗೆ ಬರಲು ತಿಳಿಸಿ ದ್ದರು ಎನ್ನಲಾಗಿದೆ.
ಅದರಂತೆ ಮೃತರ ಸಂಬಂಧಿಕರು ಬೆಳಗ್ಗೆ ಆಸ್ಪತ್ರೆಗೆ ಬಂದು ವಿಚಾರಿಸಿದಾಗ ಶವದ ಮಹ ಜರು ನಡೆಸುವ ಸಿಬ್ಬಂದಿ ಮಂಗಳೂರಿಗೆ ಹೋಗಿದ್ದಾರೆ. 11 ಗಂಟೆಯ ಬಳಿಕ ಶವದ ಮಹಜರು ನಡೆಸುವುದಾಗಿ ಡಾ. ಅಜಿತ್ ಶೆಟ್ಟಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗ ‘ನೀವು ಬ್ಯಾರಿಗಳು ಯಾವಾಗಲೂ ಹೀಗೆ ಹೊತ್ತಲ್ಲದ ಹೊತ್ತಲ್ಲಿ ಬಂದು ಯಾಕೆ ತಲೆ ತಿನ್ನುತ್ತೀರಿ. ಸಿಬ್ಬಂದಿ ಬಂದ ಬಳಿಕವೇ ಮಹಜರು ನಡೆಸುವುದು. ಈಗ ಹೊರಗೆ ಇರಿ.’ ಎಂದು ಆಸ್ಪತ್ರೆಯ ಹೊರ ಕಳಿಸಿದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಅಸಮಾಧಾನಗೊಂಡ ಮೃತರ ವಾರಸದಾರರು ತಮ್ಮ ಸಂಬಂಧಿಕರಿಗೆ ಮತ್ತು ಊರಿನವರಿಗೆ ಕರೆಮಾಡಿ ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಮೃತರ ಸಂಬಂಧಿಕರು, ಗ್ರಾಮಸ್ಥರು ಹಾಗೂ ವ್ಯೆದ್ಯರ ನಡುವೆ ಈ ಸಂದರ್ಭ ಮಾತಿನ ಚಕಮಕಿ ನಡೆಯಿತು.
ಮೃತದೇಹದ ಮಹಜರು ವರದಿ ಪಡೆಯಲು ಬಂದಿದ್ದ ಮಂಗಳೂರು ಉತ್ತರ ಸಂಚಾರ ಪೋಲಿಸ್ ಠಾಣಾ ನಿರೀಕ್ಷಕ ಮಂಜುನಾಥ್ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರಾದರೂ ಆಕ್ರೋಶಗೊಂಡ ಸಂಬಂಧಿಕರು ಹಾಗೂ ಗ್ರಾಮಸ್ಥರು ಬೆಳಗ್ಗೆ ಶವದ ಮಹಜರು ನಡೆಸುವುದಾಗಿ ತಿಳಿಸಿದ್ದರು.ಆದರೆ ಬೆಳಗ್ಗೆ ಬೇಕೆಂದೆ ಸಿಬ್ಬಂದಿಯನ್ನು ಮಂಗಳೂರಿಗೆ ಕಳುಹಿಸಿ ಧರ್ಮ ನಿಂದನೆ ಮಾಡಿ, ಜೊತೆಗೆ ಸರಕಾರಿ ಆಸ್ಪತ್ರೆಯಲ್ಲಿ ಕೋಮು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ವೈದ್ಯಾಧಿಕಾರಿಗೆ ಮುತ್ತಿಗೆ ಹಾಕಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಮತ್ತು ಸ್ಪಷ್ಟೀಕರಣ ನೀಡಬೇಕೆಂದು ಪಟ್ಟು ಹಿಡಿದರು.
ಬಳಿಕ ಕಾಂಗ್ರೆಸ್ ಮುಖಂಡರು ಆಸ್ಪತ್ರೆಗೆ ಧಾವಿಸಿ ಶಾಸಕರಿಗೆ ವಿಷಯ ತಿಳಿಸಿದರು. ಶಾಸಕರು ದೂರವಾಣಿ ಮೂಲಕ ವ್ಯೆದ್ಯರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ವ್ಯೆದ್ಯ ಡಾ. ಅಜಿತ್ ಕುಮಾರ್ ಸಿಬ್ಬಂದಿ ಸಹಾಯವಿಲ್ಲದೆ ಮೃತದೇಹದ ಮಹಜರು ಆರಂಭಿಸಿದರು. ಮಧ್ಯಾಹ್ನ ಸುಮಾರು 12:30 ವೇಳೆಗೆ ಮಹಜರು ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತ ರಿಸಲಾಯಿತು.
ಸರಕಾರಿ ಆಸ್ಪತ್ರೆಯಲ್ಲಿದ್ದು ಕೊಂಡು ಕರ್ತವ್ಯ ಲೋಪ ಎಸಗುವ ಜೊತೆಗೆ ಧರ್ಮ ನಿಂದನೆ ಮಾಡುತ್ತಾ ಕಾಲಹರಣ ಮಾಡುವ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರ ಹಿರಿಯ ವೈದ್ಯಾಧಿಕಾರಿಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲ ವಾದಲ್ಲಿ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರ, ಶಾಸಕ ಅಭಯಚಂದ್ರ ಜೈನ್ ನಿವಾಸ ಸೇರಿದಂತೆ ಮಂಗಳೂರು ಆರೋಗ್ಯ ಇಲಾಖೆಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಳೆಯಂಗಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮುಲ್ಕಿ ಸಮದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ, ವೈದ್ಯಾಧಿಕಾರಿ, ಆ್ಯಂಬುಲೆನ್ಸ್ ಸೇವೆ, ಕುಡಿಯುವ ನೀರು ಹೀಗೆ ಹಲವು ಸಮಸ್ಯೆಗಳು ಇವೆ ಎಂದು ಕೆಲ ದಿನಗಳ ಹಿಂದೆ ಮುಲ್ಕಿಯ ನಾರಾಯಣಗುರು ಸಭಾಂಗಣದಲ್ಲಿ ನಡೆದಿದ್ದ ‘ಜನಸಂಪರ್ಕ ಸಭೆಯಲ್ಲಿ’ ನಾನು ಸಭೆಯ ಮುಂದಿಡಲು ಯತ್ನಿಸಿದ್ದೆ. ಆದರೆ ಕಾಂಗ್ರೆಸ್ನ ಮುಖಂಡರು ನನ್ನನ್ನು ತಡೆದು ಸಭೆ ಯಿಂದ ಹೊರ ಕಳಿಸಿದ್ದರು. ಇಂದು ಕಾಂಗ್ರೆಸ್ ಮುಖಂಡರಿಗೆ ಸಮುದಾಯ ಆಸ್ಪತ್ರೆಯಲ್ಲಿ ನಡೆ ಯುತ್ತಿರುವ ಅವ್ಯವಹಾರಗಳು, ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳ ಅರಿವು ಸ್ವಲ್ಪ ಮಟ್ಟಿಗೆ ಆಗಿದೆ. ಇಂತಹ ಸಮಸ್ಯೆಗಳು ಪ್ರತೀ ದಿನ ಈ ಆಸ್ಪತ್ರೆಯಲ್ಲಿ ನಡೆಯುತ್ತಿರುತ್ತವೆ.
-ಶರೀಫ್ ಕೊಲ್ನಾಡು
ಎಸ್ಡಿಪಿಐ ಮುಲ್ಕಿ ವಲಯಾಧ್ಯಕ್ಷ
ಉನ್ನತ ಹುದ್ದೆಯಲ್ಲಿರುವ ವೈದ್ಯಾಧಿಕಾರಿ ತನ್ನ ಹುದ್ದೆಗೆ ಮರ್ಯಾದೆ ಕೊಟ್ಟಾದರೂ ಕನಿಷ್ಠ ಸೌಜನ್ಯದಿಂದ ವರ್ತಿಸಬೇಕಿತ್ತು. ಆದರೆ, ಇಲ್ಲಿನ ವೈದ್ಯಾಧಿಕಾರಿ ಧರ್ಮ ನಿಂದನೆ ಮಾಡುತ್ತಾ ತನ್ನ ಕರ್ತವ್ಯ ಮರೆತಿದ್ದಾರೆ.
-ಅಬ್ದುಲ್ ಖಾದರ್
ಹಳೆಯಂಗಡಿ ಗ್ರಾಪಂ ಸದಸ್ಯ
ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ‘ಡಿ’ಗ್ರೂಪ್ ನೌಕರರ ಸಂಖ್ಯೆ ಕಡಿಮೆ ಇದೆ. ಇದು ಆಸ್ಪತ್ರೆಯ ಸಮಸ್ಯೆಯಲ್ಲ ಸರಕಾರದ ಸಮಸ್ಯೆ. ಈ ಬಗ್ಗೆ ಸರಕಾರ ಗಮನಹರಿಸಬೇಕಿದೆ.
-ಧನಂಜಯ ಮಟ್ಟು
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ