ಬೆಂಕಿ ಅವಘಡ : ರೂ. 50 ಸಾವಿರಕ್ಕೂ ಅಧಿಕ ನಷ್ಟ
ಪುತ್ತೂರು, ಡಿ. 15 : ಮನೆಯೊಂದರಲ್ಲಿ ಬೆಂಕಿ ಹತ್ತಿಕೊಂಡು ರೂ. 50 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದ ಘಟನೆ ಪುತ್ತೂರು ನಗರದ ಬೊಳುವಾರು ಎಂಬಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ಉದಯ ಭಟ್ ಎಂಬವರಿಗೆ ಸೇರಿದ ಈ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಆನಂದ ಮತ್ತು ವಿಜಯ ದಂಪತಿಗಳು ಬಾಡಿಗೆಗೆ ವಾಸ ಮಾಡುತ್ತಿದ್ದರು. ಬೀಡಿ ಲೇಬಲ್ ಕೆಲಸ ಮಾಡುತ್ತಿದ್ದ ವಿಜಯ ಅವರು ತನ್ನ ಮನೆಯ ಸ್ವಲ್ಪ ದೂರದಲ್ಲಿರುವ ಮನೆಯಲ್ಲಿ ಬೀಡಿ ಲೇಬಲ್ ಕೆಲಸದಲ್ಲಿ ನಿರತರಾಗಿದ್ದರು. ಆನಂದ ಅವರು ಕೂಲಿ ಕೆಲಸ ಮಾಡುತ್ತಿದ್ದು ಕೆಲಸ ನಿಮಿತ್ತ ತೆರಳಿದ್ದರು. ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ ಹೊತ್ತಿಗೆ ಮೆನಯಿಂದ ಬೆಂಕಿ ಹತ್ತಿಕೊಂಡು ಉರಿಯಲಾರಂಭಿಸಿತ್ತು. ಇದನ್ನು ಗಮನಿಸಿದ ಪಕ್ಕದ ಮನೆಯವರು ವಿಜಯ ಅವರಿಗೆ ಮಾಹಿತಿ ನೀಡಿದ್ದರು.
ಬೆಂಕಿ ಅವಘಡದಿಂದ ಮನೆಯಲ್ಲಿದ್ದ ಕಪಾಟು, ಟಿವಿ, ಫ್ರಿಡ್ಜ್, ಗ್ರೈಂಡರ್, ಮಿಕ್ಸಿ, ಬಟ್ಟೆಬರೆ ಇನ್ನಿತರ ಸೊತ್ತುಗಳಿಗೆ ಹಾನಿಯಾಗಿದೆ. ಲೇಬಲ್ ಹಾಕಲು ತಂದಿಟ್ಟ ಬೀಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.
ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನ ನಡೆಸಿದ್ದು, ಬಳಿಕ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಯಿತು.
ಕಳೆದ ವರ್ಷ ಇದೇ ಬಾಡಿಗೆ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಮನೆಯಲ್ಲಿದ್ದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದ್ದವು. ಆ ಸಂದರ್ಭದಲ್ಲಿ ಮನೆಯಲ್ಲಿದ್ದವರಿಗೆ ಗಾಯಗಳಾಗಿದ್ದವು.