ಬೆಳುವಾಯಿ : ಬಲಿ ನೇಮೋತ್ಸವ
ಮೂಡುಬಿದಿರೆ, ಡಿ. 16 : ಇಂದಿನ ಶಿಕ್ಷಣ ಸಂಸ್ಕೃತಿ ನಾಶ ಮಾಡುವುದರ ಜೊತೆಗೆ ನಮ್ಮ ನಮ್ಮಲ್ಲಿ ಶತ್ರುತ್ವವನ್ನು ಹುಟ್ಟು ಹಾಕುತ್ತಿದೆ. ರಾಜಕೀಯ ವ್ಯವಸ್ಥೆಯೂ ಧರ್ಮವನ್ನು ಮೂಲೆಗುಂಪು ಮಾಡಿದೆ ನಮ್ಮ ಹಿರಿಯರು ನಂಬಿಕೊಂಡು ಬಂದ ಧಾರ್ಮಿಕ ನಂಬಿಕೆ, ಸಂಸ್ಕೃತಿ ಮುಂದಿನ ಪೀಳಿಗೆಗೆ ತಿಳಿಯಲು ಇಂತಹ ಉತ್ಸವಗಳು ಸಹಕಾರಿಯಾಗಿವೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಬೆಳುವಾಯಿ ಗ್ರಾಮದ ಮಂಜನಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದ ಕುಕ್ಕಿನಂತಾಯಿ ಕೊಡಮಣಿತ್ತಾಯಿ ದೊಂಪದ ಬಲಿ ನೇಮೋತ್ಸವದಂಗವಾಗಿ ಮಂಜನಕಟ್ಟೆ ಫ್ರೆಂಡ್ಸ್ ಸರ್ಕಲ್ ವತಿಯಿಂದ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಇಂದು ನಗರ ಜೀವನಕ್ಕೆ ಮಾರು ಹೋಗುತ್ತಿರುವ ಗ್ರಾಮೀಣ ಜನರು ತಮ್ಮ ಕೃಷಿಭೂಮಿಯನ್ನು ಮಾರಿ ಫ್ಲ್ಯಾಟ್ಗಳಲ್ಲಿ ನೆಲೆಸುತ್ತಿದ್ದಾರೆ. ಫ್ಲ್ಯಾಟ್ಗಳಲ್ಲಿ ಭಾವನಾತ್ಮಕ ಸಂಬಂಧಗಳಿರುವುದಿಲ್ಲ. ಸಂಪ್ರದಾಯ, ಸಂಸ್ಕೃತಿಯನ್ನು ಅನುಸರಿಸುವುದಿಲ್ಲ. ಫ್ಲ್ಯಾಟ್ಗಳು ನಮ್ಮ ಸಂಸ್ಕೃತಿಯ ಅವನತಿಯ ಸಂಕೇತಗಳಾಗಿವೆ ಎಂದರು.
ವೇದಮೂರ್ತಿ ಕೆ.ಎಸ್.ಅನಂತ ಅಸ್ರಣ್ಣ ಕಾನ ಮಾತನಾಡಿದರು.
ಕ್ಷೇತ್ರದ ಆಡಳಿತ ಮೊಕ್ತೇಸರ ಪುತ್ತಿಗೆಗುತ್ತು ಪೆರೋಡಿ ದಿನಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಜಿತ್ ಕುಮಾರ್ ಆಳ್ವ ನಡ್ಡೋಡಿಗುತ್ತು, ದಿನೇಶ್ ಶೆಟ್ಟಿ ಕಡಂಬಗುತ್ತು, ವಸಂತ ಶೆಟ್ಟಿ ಈಂದಗುತ್ತು, ಬಾಲಕೃಷ್ಣ ಶೆಟ್ಟಿ ಗೋವಾ, ಯೋಗೀಶ್ ಶೆಟ್ಟಿ ನಡಿಗುಡ್ಡೆ, ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ರತ್ನಾಕರ ಪೂಜಾರಿ ಕುಕ್ಕಿನಡಿ, ಸತೀಶ್ ಶೆಟ್ಟಿ ಕಡಂಬಗುತ್ತು, ಸ್ಥಳೀಯ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಶಶಿಕಲಾ ಭಾಗವಹಿಸಿದ್ದರು.
ಬೆಳುವಾಯಿ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಹಾಗೂ ದಿನಕರ ಬಿ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಸಾದ್ ಜೆ.ವಿ. ಸ್ವಾಗತಿಸಿದರು. ಪವಿತ್ರಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ನವಿತ ವಂದಿಸಿದರು.