ಭರತಮುನಿ ಜಯಂತಿ ಕಾರ್ಯಕ್ರಮ
ಮಂಗಳೂರು, ಜ.8: ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಮಂಗಳೂರು ವತಿಯಿಂದ ರವಿವಾರ ನಗರದ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಭರತಮುನಿ ಜಯಂತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾರದಾ ವಿದ್ಯಾಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ ಲೀಲಾಉಪಾಧ್ಯಾಯ, ಕಲೆಯು ಅಂತರಂಗದ ಭಾವನೆ ಗಳನ್ನು ವ್ಯಕ್ತಪಡಿಸುವ ಮಾಧ್ಯಮ. ವ್ಯಕ್ತಿತ್ವ ಅರಳಿಸಲು ಪೂರಕವಾಗುವ ಕಲೆಯನ್ನು ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಹೆತ್ತವರು ಹಾಗೂ ಶಿಕ್ಷಕರ ಮೇಲಿದೆ ಎಂದರು.
ಉರ್ವ ನಾಟ್ಯಾರಾಧನಾ ಕಲಾಕೇಂದ್ರದ ವಿದುಷಿ ಸುಮಂಗಲಾ ರತ್ನಾಕರ್ ಮಾತನಾಡಿ, ಎಲ್ಲ ಕಲಾ ಪ್ರಕಾರಗಳಿಗೆ ಸಂಬಂಸಿದ ವಿಷಯಗಳನ್ನು ಭರತ ತನ್ನ ನಾಟ್ಯಶಾಸ್ತ್ರದಲ್ಲಿ ತಿಳಿಸಿದ್ದು, ಕಲಾವಿದನೊಬ್ಬ ಜ್ಞಾನದೊಂದಿಗೆ ರಂಜನೆಯನ್ನು ಹೇಗೆ ನೀಡಬಲ್ಲ ಎಂಬುದನ್ನು ನಾಟ್ಯಶಾಸ್ತ್ರದಲ್ಲಿ ಸೂಕ್ಷ್ಮವಾಗಿ ತಿಳಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಯಾವ ರೀತಿಯಾಗಿ ವರ್ತಿಸಬೇಕು. ಸ್ವೇಚ್ಛಾಚಾರಕ್ಕೆ ಯಾವ ರೀತಿ ಕಡಿವಾಣ ಹಾಕಬೇಕು ಎಂಬುದನ್ನು ಸ್ಪಷ್ಟವಾಗಿ ಭರತಮುನಿಗಳು ತಿಳಿಸಿದ್ದು, ಕಲಾವಿದನು ಎಂದಿಗೂ ದುರ್ಬಲನಾಗಬಾರದು ಎಂಬುದನ್ನು ಭರತ ಪ್ರತಿಪಾದಿಸಿದ್ದಾನೆ ಎಂದು ಸುಮಂಗಲಾ ರತ್ನಾಕರ್ ನುಡಿನಮನ ಸಲ್ಲಿಸಿದರು.
ಶಾರದಾ ಮಣಿಶೇಖರ್, ರಾಜಶ್ರೀ ಉಳ್ಳಾಲ್ ಉಪಸ್ಥಿತರಿದ್ದರು. ಖಜಾಂಚಿ ಶ್ರೀಧರ್ ಹೊಳ್ಳ ಸ್ವಾಗತಿಸಿದರು. ಚಂದ್ರಶೇಖರ ನಾವಡ ವಂದಿಸಿದರು. ವಿದ್ಯಾಶ್ರೀ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.