ಕಾರ್ಖಾನೆಗಳಿಂದ ಹೊರಸೂಸುವ ಕಪ್ಪಗಿನ ಕರಿ
ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ
ಮುಲ್ಕಿ, ೆ.5: ಇಲ್ಲಿನ ಸಮೀಪದ ಕಾರ್ನಾಡು ಧರ್ಮಸ್ಥಾನ ಹಾಗೂ ಚಿತ್ರಾಪು ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಕಾರ್ಖಾನೆಗಳಿಂದ ಹೊರಸೂಸುವ ಕಪ್ಪಗಿನ ಕರಿಯಿಂದ ಎಕರೆಗಟ್ಟಲೆ ಕೃಷಿತೋಟಕ್ಕೆ ಹಾನಿಯಾಗಿದ್ದು, ಅನೇಕ ತೆಂಗಿನ ಮರಗಳು ಆಹುತಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಕಾರ್ನಾಡು ಧರ್ಮಸ್ಥಾನದ ಬಳಿಯ ಕೃಷಿಕ ಸದಾನಂದ ಪೂಜಾರಿ, ಗೋವಿಂದ ಪೂಜಾರಿ, ಕಿಶೋರ್ ಶೆಟ್ಟಿ, ದಿವಾಕರ ಕೋಟ್ಯಾನ್, ಗುಡ್ಡಯ್ಯ ಎಂಬವರ ಕೃಷಿ ಭೂಮಿಗೆ ಹಾಗೂ ಮನೆಗೆ ಕಾರ್ಖಾನೆಗಳಿಂದ ಹೊರಸೂಸುವ ಹೊಗೆ ಮಿಶ್ರಿತ ಕರಿಯಿಂದ ಅನೇಕ ತೆಂಗಿನ ಮರದ ಗರಿಗಳು ಕಪ್ಪುಬಣ್ಣಕ್ಕೆ ತಿರುಗಿವೆ. ಹಸುರಿನಿಂದ ಕಂಗೊಳಿಸಬೇಕಾಗಿದ್ದ ಕೃಷಿತೋಟ ಕಪ್ಪು ಬಣ್ಣಕ್ಕೆ ತಿರುಗಿದೆ ಅನೇಕ ತೆಂಗಿನ ಮರಗಳು ಏಕಾಏಕಿ ಕರಟಿಹೋಗಿದ್ದು ಕೃಷಿಕರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಚಿತ್ರಾಪು ಪರಿಸರದಲ್ಲೂ ಕಳೆದೊಂದು ವಾರದಿಂದ ತರಕಾರಿ ತೋಟಗಳು ಸಹಿತ ತೆಂಗು ಕಪ್ಪಾಗುತ್ತಿದೆ ಎಂದು ಸ್ಥಳೀಯ ಪಂಚಾಯತ್ ಸದಸ್ಯ ಸಂದೀಪ ಚಿತ್ರಾಪು ಆರೋಪಿಸಿದ್ದಾರೆ.
ಜಿಲ್ಲೆಯ ಪಡುಬಿದ್ರೆ ಅಥವಾ ಕೋಲ್ನಾಡಿನಲ್ಲಿರುವ ಡಾಂಬರು ಅಥವಾ ತ್ಯಾಜ್ಯ ಸಂಸ್ಕರಣಾ ಕೇಂದ್ರದಿಂದ ಬರುವ ಹೊಗೆಯಿಂದ ಈ ರೀತಿ ಆಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿರುವ ಸ್ಥಳೀಯ ಪಂಚಾಯತ್ ಸದಸ್ಯ ಪುತ್ತು ಬಾವ ಮಾತನಾಡಿ, ಕಪ್ಪಗಿನ ಮಸಿಯಿಂದ ಎಕರೆಗಟ್ಟಲೆ ಕೃಷಿಗೆ ಹಾನಿಯಾಗಿದೆ ಹಾಗೂ ಪರಿಸರ ಹಾನಿಯೂ ಸಂಭವಿಸಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಸ್ಥಳೀಯರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಕೂಡಲೇ ಮುಲ್ಕಿ ನಪಂ ಆರೋಗ್ಯಾಕಾರಿಯನ್ನು ಸಂಪರ್ಕಿಸಲಾಗುವುದು ಹಾಗೂ ಕಪ್ಪಗಿನ ಹುಡಿಯನ್ನು ಪೌಡರ್ ಲ್ಯಾಬ್ಗೆ ಕಳುಹಿಸಲಾಗುವುದು ಎಂದರು.
ಈ ಬಗ್ಗೆ ಕಾರಣ ತಿಳಿದು ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಕೃಷಿಗೆ ಹಾನಿಯಾಗುವ ಯಾವುದೇ ಕಂಪೆನಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.