ಕೊಲ್ಯ: ಸಚಿವ ಯು.ಟಿ. ಖಾದರ್ ಹೇಳಿಕೆ ಖಂಡಿಸಿ ಪ್ರತಿಭಟನೆ, ಕರಿಪತಾಕೆ ಪ್ರದರ್ಶನ
ಉಳ್ಳಾಲ, ೆ.26: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿನಲ್ಲಿ ನಡೆದ ಕೋಮು ಸೌಹಾರ್ದ ಸಭೆಯಲ್ಲಿ ಭಾಗವಹಿಸುವುದನ್ನು ವಿರೋಸಿ ಸಂಘ ಪರಿವಾರ ಕರೆಕೊಟ್ಟ ಹರತಾಳಕ್ಕೆ ಪ್ರತಿಯಾಗಿ ಬಂದ್ಗೆ ಕರೆಕೊಟ್ಟ ಸಂಘ ಪರಿವಾರದ ಸದಸ್ಯರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಮಾತನ್ನು ಸಚಿವ ಯು.ಟಿ. ಖಾದರ್ ನುಡಿದಿರುವುದು ಖಂಡನೀಯ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು.
ಕೊಲ್ಯದಲ್ಲಿ ಹಿರಿಯ ವ್ಯಕ್ತಿಯೊಬ್ಬರಿಗೆ ನಡೆಯುವ ಪೌರಸನ್ಮಾನ ಕಾರ್ಯಕ್ರಮಕ್ಕೆ ಸಚಿವ ಯು.ಟಿ. ಖಾದರ್ ಆಗಮಿಸಲಿದ್ದಾರೆ ಎಂಬ ಸುದ್ದಿಯನ್ನು ಅರಿತು ಸಂಘ ಪರಿವಾರದ ಸದಸ್ಯರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕ್ರಿಮಿನಲ್ ಹಿನ್ನೆಲೆ ಇರುವ ಸಿಪಿಎಂ ಮುಖ್ಯಮಂತ್ರಿ ಮಂಗಳೂರಿನಲ್ಲಿ ಸೌಹಾರ್ದದ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಲ್ಲಿ ಪಾಲು ಪಡೆದಿರುವ ಪಕ್ಷದ ಮುಖಂಡರು ಭಾಗಹಿಸಿದ ಸಭೆಯಲ್ಲಿ ಸಚಿವರು ಭಾಷಣ ಮಾಡುವ ಔಚಿತ್ಯವಿರಲಿಲ್ಲ. ಅದರಲ್ಲಿಯೂ ಬಂದ್ ಕರೆಕೊಟ್ಟ ಸಂಘ ಪರಿವಾರದ ಸದಸ್ಯರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಹೇಳಿರುವುದು ಸಮಂಜಸವಲ್ಲ ಎಂದರು.
ಬಳಿಕ ಸಂಘ ಪರಿವಾರ ಕಾರ್ಯಕರ್ತರು ಕರಿಪತಾಕೆ ಪ್ರದರ್ಶಿಸಿದರು. ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಸುರೇಂದ್ರ ಪೆರ್ಮನ್ನೂರು, ಪ್ರಕಾಶ್ ಸಿಂಪೋನಿ, ಪ್ರೇಮನಾಥ ಪುತ್ರನ್, ಬಿಜೆಪಿ ಕ್ಷೇತ್ರ ಯುವಮೋರ್ಚಾ ಅಧ್ಯಕ್ಷ ಸುಜಿತ್ ಮಾಡೂರು, ಯುವಮೋರ್ಚಾ ಕಾರ್ಯದರ್ಶಿ ಸಚಿನ್ ಶೆಟ್ಟಿ ಸಾಂತ್ಯ, ರವಿ ಅಸೈಗೋಳಿ, ಗುರುಪ್ರಸಾದ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.