ಕಾಂಗ್ರೆಸ್ ನಿರ್ನಾಮದ ಬಿಜೆಪಿ ಕನಸು ಭಗ್ನ: ಪ್ರಮೋದ್ ಮದ್ವರಾಜ್
ಉಡುಪಿ, ಮಾ.11: ದೇಶದ ಐದು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣಾ ಫಲಿತಾಂಶ, ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಬಿಜೆಪಿಯ ಕನಸನ್ನು ಭಗ್ನಗೊಳಿಸಿದೆ ಎಂದು ರಾಜ್ಯ ಮೀನುಗಾರಿಕೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಅಜ್ಜರಕಾಡಿನ ಪುರಭವನದಲ್ಲಿ ಇಂದು ಹಮ್ಮಿಕೊಳ್ಳಲಾದ ದೇಶದ ಪ್ರಥಮ ಮಹಿಳಾ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ನೂರನ ಜನ್ಮದಿನದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.
ಒಂದು ಕಾಲದಲ್ಲಿ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನ ಹೊಂದಿದ್ದ ಬಿಜೆಪಿ ದೇಶದಲ್ಲಿ ನಿರ್ನಾಮವಾಗದಿರುವಾಗ, ಕಳೆದ ಚುನಾವಣೆಯಲ್ಲಿ 44 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ನ್ನು ಖಂಡಿತ ಯಾರಿಗೂ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದವರು ಹೇಳಿದರು.
1947ರಲ್ಲಿ ಈ ದೇಶಕ್ಕೆ ಸ್ವಾತಂತ್ರ ದೊರಕುವಾಗ ದೇಶದ 30 ಕೋಟಿ ಜನಸಂಖ್ಯೆಯಲ್ಲಿ 25 ಕೋಟಿ ಮಂದಿ ಬಡತನದ ರೇಖೆಗಿಂತ ಕೆಳಗೆ ಇದ್ದರೆ, ಈಗ ಈ ಜನಸಂಖ್ಯೆ 130 ಕೋಟಿಗೇರಿದಾಗಲೂ ಬಡವರ ಸಂಖ್ಯೆ 25 ಕೋಟಿ ಯಲ್ಲೇ ಉಳಿದಿರಲು, ಉಳಿದ 105 ಕೋಟಿ ಮಂದಿಗೆ ಎರಡು ಹೊತ್ತಿನ ಊಟ ನೀಡಿರುವುದು ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ಪ್ರಮೋದ್ ಹೇಳಿದರು.
ವಿಶ್ವದ 200 ದೇಶಗಳಲ್ಲಿ ಭಾರತ ಇಂದು ಅಮೆರಿಕ ಮತ್ತು ಚೀನದ ಬಳಿಕ ಮೂರನೇ ಸ್ಥಾನಕ್ಕೇರಲು ಕಾಂಗ್ರೆಸ್ ಪಕ್ಷದ ಆಡಳಿತವೇ ಕಾರಣವಾಗಿದೆ ಎಂದ ಅವರು, ರಾಜ್ಯದಲ್ಲೂ ಭೂಸುಧಾರಣೆ, 20 ಅಂಶಗಳ ಕಾರ್ಯಕ್ರಮದ ಮೂಲಕ ಜನರ ಬದುಕಿನ ಮಟ್ಟವನ್ನು ಮೇಲಕ್ಕೇತ್ತಿತ್ತು ಎಂದರು.
ಆದರೆ ಇಂದಿನ ಯುವಜನಾಂಗ, ತನ್ನ ತಾತ-ಮುತ್ತಾತನ ಏಳಿಗೆಗೆ ಕಾರಣ ವಾದ ಅಂಶಗಳನ್ನು ತಿಳಿಯದೇ ಅನ್ಯ ಪಕ್ಷಗಳತ್ತ ಒಲವು ಹೊಂದಿದ್ದು, ಅವರಿಗೆ ವಿಷಯ ಮನವರಿಕೆ ಮಾಡಿ ಕಾಂಗ್ರೆಸ್ನ ಸಾಧನೆಗಳನ್ನು ಅವರಿಗೆ ವಿವರಿಸುವ ಕೆಲಸವನ್ನು ಮಹಿಳಾ ಕಾಂಗ್ರೆಸ್ ಸದಸ್ಯೆಯರು ಮಾಡಬೇಕು ಎಂದರು.
ಸಮಾರಂಭದಲ್ಲಿ ಸಾಧನೆಗಳನ್ನು ಮಾಡಿದ ಕಾಂಗ್ರೆಸ್ ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು. ರಾಣಿ ಅಬ್ಬಕ್ಕ ಪ್ರಶಸ್ತಿ ಪಡೆದ ಸರಳಾ ಕಾಂಚನ್, ಜನಪದ ಅಕಾಡೆಮಿ ಪ್ರಶಸ್ತಿ ಪಡೆದ ಕುಡುಬಿ ಜನಾಂಗದ ಬೆಳ್ಳಿಬಾಯಿ, ಎಂ.ಎ.ಗಫೂರ್, ಡಾ.ಸುನೀತಾ ಡಿ.ಶೆಟ್ಟಿ ಹಾಗೂ ಇತರರು ಸನ್ಮಾನ ಸ್ವೀಕರಿಸಿದರು.
ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ನರಸಿಂಹ ಮೂರ್ತಿ, ಅಮೃತ ಶೆಣೈ, ಸತೀಶ್ ಅಮೀನ್ ಪಡುಕೆರೆ, ಸದಸ್ಯೆಯರಾದ ಮೀನಾಕ್ಷಿ ಮಾಧವ ಬನ್ನಂಜೆ, ಜಯಶ್ರೀ ಕೃಷ್ಣರಾಜ್, ಸರಸು ಡಿ.ಬಂಗೇರ, ಸೌಮ್ಯ, ಸಂಧ್ಯಾ ತಿಲಕರಾಜ್, ಶೋಭಾ ಕಕ್ಕುಂಜೆ, ಚಂದ್ರಿಕಾ ಕೇಳ್ಕರ್, ಗೀತಾ ವಾಗ್ಳೆ, ಮಾಲಿನಿ, ಸುಜಾತ ಬಾಯಿ, ಗೋಪಿ ಕೆ.ನಾಯ್ಕೆ ಮುಂತಾದವರು ಉಪಸ್ಥಿತರಿದ್ದರು.
ಮಹಿಳಾ ಕಾಂಗ್ರೆಸ್ನ ಜಿಲ್ಲಾಧ್ಯಕ್ಷೆ ವರೋನಿಕಾ ಕರ್ನೇಲಿಯೊ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.