ಒಬ್ಬಂಟಿ ಮಹಿಳೆಗೆ ರಕ್ಷಣೆ ನೀಡಿದ ಪೊಲೀಸ್ ಸಿಬ್ಬಂದಿಗೆ ಮಹಿಳೆಯಿಂದ ಮೆಚ್ಚುಗೆ ಪತ್ರ
ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗೆ ನಗದು ಬಹುಮಾನ
ಕೊಣಾಜೆ, ಮಾ.11: ಕೆಲವೊಂದು ಸಂದರ್ಭದಲ್ಲಿ ಜನಸಾಮಾನ್ಯರ ರಕ್ಷಣೆಗಾಗಿ ಪೊಲೀಸರು ರಾತ್ರಿ ಹಗಲು ನಿದ್ದೆಗೆಟ್ಟು ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೂ ಪೊಲೀಸರನ್ನು ದೂರುವವರು ಬಹಳಷ್ಟು ಜನ ಇರುತ್ತಾರೆ. ಆದರೆ ಕೊಣಾಜೆಯ ಪೊಲೀಸ್ ಸಿಬ್ಬಂದಿಯೊರ್ವರು ಮಹಿಳೆಯೊರ್ವರಿಗೆ ರಕ್ಷಣೆಯಾಗಿ ನಿಂತು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಮುಡಿಪು ಪರಿಸರದಲ್ಲಿ ರಾತ್ರಿಯ ವೇಳೆಯಲ್ಲಿ ವಾಹನಗಳು ಸಿಗದೆ ಮಹಿಳೆಯೊರ್ವರು ಮದ್ಯರಾತ್ರಿಯಾದರೂ ಬಸ್ ನಿಲ್ದಾಣದ ಸಮೀಪವೇ ಉಳಿದುಕೊಳ್ಳುವಂತಾಗಿದ್ದು. ಉಳಿದ ಖಾಸಗಿ ವಾಹಗಳು ಓಡಾಡುತ್ತಿದ್ದರೂ ಭಯದಿಂದ ಮದ್ಯರಾತ್ರಿಯಾಗಿದ್ದರಿಂದ ಭಯದಿಂದ ಅದನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿರಲಿಲ್ಲ.
ಅದೇ ಸಂದರ್ಭದಲ್ಲಿ ಪೊಲೀಸ್ ವಾಹನದಲ್ಲಿ ಅದೇ ರಸ್ತೆಯಲ್ಲಿ ಬಂದ ಕೊಣಾಜೆ ಪೊಲೀಸ್ ಸಿಬ್ಬಂದಿ ದೇವರಾಜ್ ಅವರು ಮಹಿಳೆಯನ್ನು ಕಂಡು ವಿಚಾರಿಸಿದ್ದರು. ಬಳಿಕ ಮಹಿಳೆಯ ಅಸಾಹಯಕತೆಯನ್ನು ಕಂಡ ದೇವರಾಜ್ ಅವರು ಮಹಿಳೆಯನ್ನು ಪೊಲೀಸ್ ವಾಹನದಲ್ಲಿಯೇ ಅವರ ಮನೆಗೆ ಸುರಕ್ಷಿತವಾಗಿ ಮನೆಗೆ ತಲುಪಿಸಿ ವಾಪಸ್ಸಾಗಿದ್ದರು.
ಬಳಿಕ ಮಹಿಳೆಯು ಪೊಲೀಸರ ಜವಾಬ್ಧಾರಿ ಮತ್ತು ಪ್ರಾಮಾಣಿಕತೆ ಹಾಗೂ ಸುರಕ್ಷಿತವಾಗಿ ತನ್ನನ್ನು ಮನೆಗೆ ತಲುಪಿಸಿದ ಪೊಲೀಸ್ ಸಿಬ್ಬಂದಿಯ ಕುರಿತು ಪತ್ರವನ್ನು ಬರೆದು ದೇವರಾಜ್ ಹಾಗೂ ಇಡೀ ಪೊಲೀಸ್ ಇಲಾಖೆಗೆ ದನ್ಯವಾದವನ್ನು ಸಲ್ಲಿಸಿದ್ದರು.
ಆ ಬಳಿಕ ಪೊಲೀಸ್ ಪೇದೆ ದೇವರಾಜ್ ಅವರ ಪ್ರಾಮಾಣಿಕ ಸೇವೆಯ ಬಗ್ಗೆ ಅರಿತುಕೊಂಡ ಪೊಲೀಸ್ ಆಯುಕ್ತರು ದೇವರಾಜ್ ಅವರಿಗೆ ಹತ್ತು ಸಾವಿರ ನಗದು ನೀಡಿ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಎಸಿಪಿ ಶೃತಿ, ಕೊಣಾಜೆ ಠಾಣಾ ಇನ್ಸ್ಪೆಕ್ಟರ್ ಅಶೋಕ್ ಜೊತೆಗಿದ್ದರು.
ಒಟ್ಟಿನಲ್ಲಿ ರಾತ್ರಿಯ ವೇಳೆ ಬಸ್ ಸಿಗದೆ ಉಳಿದುಕೊಂಡಿದ್ದ ಮಹಿಳೆಗೆ ರಕ್ಷಣೆಯಾಗಿ ನಿಂತ ದೇವರಾಜ್ ಅವರ ಕಾರ್ಯವು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.