ಉಳ್ಳಾಲದಲ್ಲಿ ಯುವಕನ ಮೇಲೆ ತಲವಾರು ದಾಳಿ
ಉಳ್ಳಾಲ, ಮಾ.27: ಉಳ್ಳಾಲ ಪೇಟೆಯ ರಹ್ಮಾನಿಯಾ ಮಸೀದಿಯ ಬಳಿ ಬೈಕ್ನಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದ ಯುವಕನೋರ್ವನಿಗೆ ದುಷ್ಕರ್ಮಿಗಳಿಬ್ಬರು ತಲವಾರಿನಿಂದ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ರವಿವಾರ ತಡರಾತ್ರಿ ನಡೆದಿದೆ.
ದಾಳಿಯ ಸಂದರ್ಭದಲ್ಲಿ ಯುವಕನ ಬೊಬ್ಬೆ ಕೇಳಿ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿದಾಗ ಆಗಂತಕರು ಅಲ್ಲಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಯುವಕನನ್ನು ಕೋಡಿ ನಿವಾಸಿ ನೌಶಾದ್ (22) ಎಂದು ಗುರುತಿಸಲಾಗಿದೆ. ನೌಷಧ್ ಮುಕ್ಕಚ್ಚೇರಿಯಲ್ಲಿ ಸಮೋಸ(ತಿನಿಸು)ತಯಾರಿ ಕೆಲಸಕ್ಕೆಂದು ರವಿವಾರ ರಾತ್ರಿ 12 ಗಂಟೆ ಸುಮಾರಿಗೆ ಕೋಡಿಯಿಂದ ತನ್ನ ಬೈಕ್ನಲ್ಲಿ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳು:
ನೌಷಾದ್ ಬೈಕ್ ಮೂಲಕ ಉಳ್ಳಾಲ ಪೇಟೆಯ ರಹಿಮಾನಿಯಾ ಮಸೀದಿ ಬಳಿ ತಲುಪುತ್ತಿದ್ದಂತೆಯೇ ಕಪ್ಪು ಯೂನಿಕೋರ್ನ್ ಬೈಕಲ್ಲಿ ಬಂದ ಇಬ್ಬರು ತಲವಾರು ಬೀಸಿದ್ದು ಕೂಡಲೇ ನೌಶಾದ್ ಎಡಗೈಯನ್ನು ಅಡ್ಡ ಹಿಡಿದಿದ್ದು ಕೈಗೆ ತಲವಾರಿನ ಏಟು ತಗುಲಿದೆ.
ನೌಶಾದ್ ಬೊಬ್ಬೆ ಕೇಳಿ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದು ರಾತ್ರಿಪಾಳಿ ಕರ್ತವ್ಯದಲ್ಲಿದ್ದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಗೊಂಡ ನೌಶಾದ್ ನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದು ಗಾಯಾಳು ಚೇತರಿಸಿದ್ದಾನೆ.
ಘಟನೆಯನ್ನು ಖಂಡಿಸಿ ಉಳ್ಳಾಲ ಪೊಲೀಸ್ ಠಾಣೆ ಮತ್ತು ಆಸ್ಪತ್ರೆಯಲ್ಲಿ ನೂರಾರು ಜನರು ಜಮಾವಣೆಗೊಂಡರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಚಂದ್ರಶೇಖರ್, ಡಿಸಿಪಿ ಶಾಂತರಾಜು, ಎಸಿಪಿ ಶೃತಿ, ಇನ್ಸ್ಪೆಕ್ಟರ್ ಗೋಪಿಕೃಷ್ಣ ಅವರು ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದರು.