ಮೂಳೂರು: ಬೈಕ್ ಅಪಘಾತದಲ್ಲಿ ಓರ್ವ ಮೃತ್ಯು, ಇಬ್ಬರಿಗೆ ಗಾಯ
ಕೊಣಾಜೆ, ಎ.16: ಬೈಕ್ ಅಪಘಾತ ಸಂಭವಿಸಿ ಬೈಕ್ನಲ್ಲಿದ್ದ ಇಬ್ಬರು ಗಾಯಗೊಂಡು ಓರ್ವ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ಇರಾ ಮೂಳೂರು ಬಳಿ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮೆಲ್ಕಾರ್ ನಿವಾಸಿ ವಿಲ್ಸನ್ ಡಿಸೋಜ ಎಂದು ಗುರುತಿಸಲಾಗಿದೆ. ಕೀರ್ತಿ ಹಾಗೂ ಪ್ರಕಾಶ್ ಎಂಬವರು ಗಾಯಗೊಂಡು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕುಕ್ಕಾಜೆಯಲ್ಲಿರುವ ಗೆಳೆಯನ ಮನೆಗೆ ಕಾರ್ಯಕ್ರಮಕ್ಕೆಂದು ತೆರಳಿದ್ದ ಮೂವರು ಅಲ್ಲಿ ಊಟ ಮುಗಿಸಿ ಅಲ್ಲಿಂದ ಬಾಳೆಪುಣಿ ಸಮೀಪದ ಇರಾ ಮುಳೂರು ಬಳಿಯ ಗುಡ್ಡ ಪ್ರದೇಶಕ್ಕೆ ರಾತ್ರಿ ವಾಯುವಿಹಾರಕ್ಕೆ ತೆರಳಿದ್ದರು. ಬಳಿಕ ಸುಮಾರು 1 ಗಂಟೆಯ ವೇಳೆಗೆ ಒಂದೇ ಬೈಕ್ನಲ್ಲಿ ಮನೆಯ ಕಡೆಗೆ ತೆರಳುತ್ತಿದ್ದಾಗ ಮೂಳೂರು ಬಳಿ ಬೈಕ್ ನಿಯಂತ್ರಣ ತಪ್ಪಿ ಮನೆಯೊಂದರ ಆವರಣಗೋಡೆಗೆ ಬಡಿದಿತ್ತು. ಇದರಿಂದ ಬೈಕ್ ಚಲಾಯಿಸುತ್ತಿದ್ದ ವಿಲ್ಸನ್ ಎಂಬವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸಾರ್ವಜನಿಕರು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೈಕ್ನ ಹಿಂಬದಿಯಲ್ಲಿ ಕೂತಿದ್ದ ಪ್ರಕಾಶ್ ಹಾಗೂ ಕೀರ್ತಿ ಅವರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.