ಪ್ರತ್ಯೇಕ ಘಟನೆ: ಇಬ್ಬರ ಆತ್ಮಹತ್ಯೆ
ಮಲ್ಪೆ, ಮೇ 6: ಮಾಡಿನ ಪಕ್ಕಾಸಿಗೆ ನೇಣು ಹಾಕಿಕೊಂಡು ನೇಜಾರು ಕೆಳಾರ್ಕಳಬೆಟ್ಟು ರೆಬೆಲ್ಲೋ ಕಾಂಪೌಂಡ್ ನಿವಾಸಿ ಜೆ.ಮುಹಮ್ಮದ್ (55) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮುಹಮ್ಮದ್ ಅವರ ಪುತ್ರ ಶಬೀರ್ ತನ್ನ ಅಣ್ಣನೊಂದಿಗೆ ಬೆಳಗ್ಗೆ 4:30ಕ್ಕೆ ನಮಾಜ್ ಮಾಡಲು ಸಮೀಪದ ಮಸೀದಿಗೆ ತೆರಳಿದ್ದು, 5 ಗಂಟೆ ಸುಮಾರಿಗೆ ಮರಳಿ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಿಂದೆ ಸಂತೆಕಟ್ಟೆಯಲ್ಲಿ ಆಟೋ ಚಾಲಕರಾಗಿದ್ದ ಮುಹಮ್ಮದ್ ಹಲವರಿಂದ ಪಡೆದ ಸಾಲವನ್ನು ತೀರಿಸಲು ಸಾದ್ಯವಾಗದ ಕಾರಣ ಬೇಸರಗೊಂಡಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಶಬೀರ್ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ವಿಪರೀತ ಮದ್ಯಸೇವನೆ ಹಾಗೂ ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಉಂಟಾಗುತ್ತಿದ್ದ ಏರುಪೇರಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡ ವಡೇರಹೋಬಳಿ ಗ್ರಾಮ ಬಿ.ಎಸ್.ರಸ್ತೆಯ ನಾರಾಯಣ ದೇವಾಡಿಗ (68) ಎಂಬವರು ಶುಕ್ರವಾರ ಅಪರಾಹ್ನ ಗ್ರಾಮದ ನೆಹರೂ ಮೈದಾನದಲ್ಲಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.