ನಗದು ರಹಿತ ವ್ಯವಹಾರದಿಂದ ಶ್ರಮ, ಸಮಯ ಉಳಿತಾಯ: ಡಾ. ಕೆ.ಎಂ. ಕೃಷ್ಣ ಭಟ್
ಪುತ್ತೂರು, ಮೇ 10: ಪ್ರಸ್ತುತ ನಗದು ರಹಿತ ಸಮಾಜದೆಡೆಗೆ ನಾವು ಹೆಜ್ಜೆ ಇಡಬೇಕಿದ್ದು, ನಗದು ರಹಿತ ವ್ಯವಹಾರ ನಮ್ಮ ಭದ್ರತೆಯ ದೃಷ್ಟಿಯಿಂದಲೂ ಉಪಯುಕ್ತ. ಕಾರ್ಡ್ ಬಳಸಿ ವ್ಯವಹರಿಸುವುದರಿಂದ ಬ್ಯಾಂಕ್ಗಳಿಗೆ ಓಡಾಡುವ ಶ್ರಮ ಮತ್ತು ಸಮಯ ಉಳಿತಾಯವಾಗುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜು ದತ್ತು ಸ್ವೀಕರಿಸಿರುವ ಕುಡಿಪ್ಪಾಡಿ ಗ್ರಾಮದಲ್ಲಿ ಮಂಗಳವಾರ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವತಿಯಿಂದ ನಡೆದ ನಗದು ರಹಿತ ವ್ಯವಹಾರದ ಬಗೆಗಿನ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ನೂತನ ವಿಚಾರಗಳಿಗೆ ಒಗ್ಗಿಕೊಂಡು ಮುಂದುವರಿಯುವ ಮನಃಸ್ಥಿತಿಯನ್ನು ರೂಢಿಸಿಕೊಂಡರೆ ಮಾತ್ರ ನಿರೀಕ್ಷಿತ ಆರ್ಥಿಕ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯ ಎಂದು ತಿಳಿಸಿದರು.
ಕುಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕೆ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಕುಡಿಪ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ ಹಾಗೂ ವಿವೇಕಾನಂದ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಶಕುಮಾರ್ ಎಂ.ಕೆ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗ ಮುಖ್ಯಸ್ಥೆ ಪ್ರೊ.ವಿಜಯ ಸರಸ್ವತಿ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕ ಹರಿಪ್ರಸಾದ್ ವಂದಿಸಿದರು. ಉಪನ್ಯಾಸಕಿ ಅನನ್ಯಾ ವಿ ಕಾರ್ಯಕ್ರಮ ನಿರ್ವಹಿಸಿದರು.