ಎಲ್ಐಸಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ 15ನೇ ವರ್ಷಾಚರಣೆ; ವೈದ್ಯಕೀಯ ಶಿಬಿರ
ಉಡುಪಿ, ಜೂ.6: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 15ನೇ ವರ್ಷಾಚರಣೆಯ ಸಂಭ್ರಮ, ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ವೈದ್ಯಕೀಯ ತಪಾಸಣಾ, ರಕ್ತದಾನ ಶಿಬಿರ ಜೂ.10ರ ಶನಿವಾರ ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ಮುರಳೀಧರ ಡಿ.ವಿ. ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.10ರ ಬೆಳಗ್ಗೆ 8ರಿಂದ ವಿವಿಧ ಕಾರ್ಯಕ್ರಮಗಳು ಅಜ್ಜರಕಾಡಿನ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಯಲಿವೆ ಎಂದರು.
ವೈದ್ಯಕೀಯ ತಪಾಸಣಾ ಶಿಬಿರ ಬೆಳಗ್ಗೆ 8ರಿಂದ ಅಪರಾಹ್ನ 1ರವರೆಗೆ ನಡೆಯಲಿವೆದ. ಇದರೊಂದಿಗೆ ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಗಳು ನಡೆಯಲಿವೆ.
ಸೊಸೈಟಿಯ 15ನೇ ವರ್ಷಾಚರಣೆ ಬೆಳಗ್ಗೆ 11:30ಕ್ಕೆ ಉದ್ಘಾಟನೆಗೊಳ್ಳಲಿದೆ. ಭಾರತೀಯ ಜೀವವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ವಿಶ್ವೇಶ್ವರ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣಕುಮಾರ್ ನಾಯಕ್, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ, ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಡಾ.ಯು. ದಿನಕರ ಶೇಟ್, ಬಿ.ವಿ.ಲಕ್ಷ್ಮಿನಾರಾಯಣ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ಚಾ..ಪರ್ಕ ಕಲಾವಿದರಿಂದ ದೇವದಾಸ ಕಾಪಿಕಾಡ್ ನಿರ್ದೇಶನದಲ್ಲಿ ‘ಯಾನ್ ಪಂಡೆಂದು ಪಣೊಡ್ಚಿ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶೇಖರ ಬಿ.ಪೂಜಾರಿ, ಕಾರ್ಯದರ್ಶಿ ರಶ್ಮಿ ಆರ್.ರಾವ್, ನಿರ್ದೇಶಕರಾದ ಶಾಂತ ಜಯಕರ, ದಾಮೋದರ ನಾಯ್ಕಿ, ರವೀಂದ್ರನಾಥ ಕಿಣಿ, ಮುರಳಿ ಶೇರಿಗಾರ್, ರವೀಂದ್ರ ಶೆಟ್ಟಿ ಹಾಗೂ ವಂದನಾ ವಿಶ್ವನಾಥ ಉಪಸ್ಥಿತರಿದ್ದರು.