ಮಜ್ದೂರ್ ಸಂಘದ ದ.ಕ. ಜಿಲ್ಲಾ ಮಟ್ಟದ ಸಮಾವೇಶ
ಮಂಗಳೂರು, ಜು.15: ಅಖಿಲ ಭಾರತ ರಾಷ್ಟ್ರೀಯ ಮಜ್ದೂರ್ ಸಂಘದ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಾವೇಶ ಪಣಂಬೂರಿನ ಜವಾಹರ್ಲಾಲ್ ನೆಹರೂ ಸಭಾಂಗಣದಲ್ಲಿ ಶನಿವಾರ ಜರಗಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ,ಸಂಸದ ಆಸ್ಕರ್ ಫೆರ್ನಾಂಡಿಸ್ ಅವರು ಸಮಾವೇಶಕ್ಕೆ ಶುಭಹಾರೈಸಿದರು. ಮಾಜಿ ಶಾಸಕ ಮತ್ತು ಮಾಜಿ ಇಂಟಕ್ ರಾಜ್ಯಾಧ್ಯಕ್ಷ ಎಂ. ಎನ್ .ಅಡ್ಯಂತಾಯ ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಮಿಕ ಸಂಘಟನೆಯನ್ನು ಡಿವೈಡ್ ಅ್ಯಂಡ್ ರೂಲ್ ಪಾಲಿಸಿ ಮೂಲಕ ಒಡೆಯಲು ಯತ್ನಿಸುತ್ತಿದ್ದಾರೆ. ಇಂಟಕ್ ಅನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನವಮಂಗಳೂರು ಬಂದರಿನಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುವ ಅನೇಕ ಜನ ಕಾರ್ಮಿಕರನ್ನು ನಿಗದಿತ ಸಮಯದ ತನಕ ದುಡಿಸಿ ನಂತರ ಕೆಲಸದಿಂದ ತೆಗೆಯಲಾಗುತ್ತಿದೆ. ಅದರ ಬದಲು ಸಾಕಷ್ಟು ವರ್ಷ ದುಡಿದ ಕಾರ್ಮಿಕರಿಗೆ ಕೆಲಸದ ಭದ್ರತೆಯನ್ನು ಕೊಡಬೇಕು ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಆಗ್ರಹಿಸಿದರು. ಇಂಟಕ್ ಸಂಘಟನೆ ಕೂಡ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಬಂದಿದೆ. ಆದರೆ ಎಂ.ಎನ್. ಅಡ್ಯಂತಾಯರು ಶಾಸಕರಾದ ನಂತರ ಇಂಟಕ್ ನಿಂದ ಯಾರಿಗೂ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ರಾಜ್ಯದಲ್ಲಿ ಕನಿಷ್ಟ 5 ಸೀಟನ್ನಾದರೂ ಇಂಟಕ್ ಗೆ ಕೊಟ್ಟು ರಾಜ್ಯದಲ್ಲಿ ಇಂಟಕ್ ಕಾರ್ಯಕರ್ತರು ಶಾಸಕರಾಗಬೇಕು. ಅದಕ್ಕೆ ಕಾಂಗ್ರೆಸ್ ನಾಯಕರು ಸಹಕರಿಸಬೇಕು ಎಂದು ಹೇಳಿದರು.
ನವಮಂಗಳೂರು ಜವಹರಲಾಲ್ ನೆಹರು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಇಂಟಕ್ ರಾಷ್ಟ್ರೀಯ ಅಧ್ಯಕ್ಷ ಸಂಜೀವ ರೆಡ್ಡಿ ಉದ್ಘಾಟಿಸಿದರು. ಬ್ಲೋಸಮ್ ಫೆರ್ನಾಂಡಿಸ್, ಶಾಸಕ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮೊಯ್ದೀನ್ ಬಾವ, ಮೇಯರ್ ಕವಿತಾ ಸನಿಲ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಬಿ ಎಸ್ ಖಾದರ್, ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ ಎ ಗಫೂರ್, ರಾಜ್ಯ ಇಂಟಕ್ ಉಪಪ್ರಧಾನ ಕಾರ್ಯದರ್ಶಿ ಶಶಿರಾಜ್ ಅಂಬಟ್, ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಪ್ರತಿಭಾ ಕುಳಾಯಿ,ಪುಟ್ಟಸ್ವಾಮಿ,ವಿಶ್ವಾಸ್ ದಾಸ್,ಮಹಿಳಾ ಘಟಕದ ತಾರಾಚಂದ್ರ, ಮಾಜಿ ಉಪಮೇಯರ್ ಪುರುಷೋತತಿಮ್ ಚಿತ್ರಾಪುರ, ಕಾಂಗ್ರೆಸ್ ಮುಖಂಡರಾದ ಜಿ ಎ ಬಾವ, ಬಿ ಎ ಸುರೇಶ್, ಕೋಡಿಜಾಲ್ ಇಬ್ರಾಹಿಂ, ಕಳ್ಳಿಗೆ ತಾರಾನಾಥ ಶೆಟ್ಟಿ, ಲುಕ್ಮಾನ್, ವಿಶ್ವಾಸ್ ದಾಸ್ ಅಮೀನ್, ದೀಕ್ಷಿತ್ ಶೆಟ್ಟಿ, ಪದಾಧಿಕಾರಿಗಳಾದ ಶೃತಿ ಶ್ರೀನಾಥ ,ರಾಜ್ಯ,ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ್ ಶೆಟ್ಟಿ ಸ್ವಾಗತಿಸಿದರು. ದಿನೇಶ್ ಶೆಟ್ಟಿ ನಿರೂಪಿಸಿದರು.ಚಿತ್ತರಂಜನ್ ವಂದಿಸಿದರು.