ಅರಣ್ಯ ಇಲಾಖೆಯಿಂದ 60,000 ಮಂದಿಗೆ ಅನಿಲ ವಿತರಣೆ
ಉಡುಪಿ, ಜು. 24: ಕಾಡಿನ ಉಳಿವಿಗಾಗಿ ಉಡುಪಿ ಜಿಲ್ಲೆಯಲ್ಲಿ 3,500 ಮಂದಿ ಸೇರಿದಂತೆ ರಾಜ್ಯದ 60,000 ಬಡವರಿಗೆ ಅರಣ್ಯ ಇಲಾಖೆಯ ವತಿಯಿಂದ ಅನಿಲವನ್ನು (ಗ್ಯಾಸ್ ಮತ್ತು ಸ್ಟೌವ್) ಶೀಘ್ರವೇ ವಿತರಿಸಲಾಗುವುದು ಎಂದು ರಾಜ್ಯ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಕರ್ನಾಟಕ ಅರಣ್ಯ ಇಲಾಖೆಯ ಕುಂದಾಪುರ ವಿಭಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ‘ನೀರಿಗಾಗಿ ಅರಣ್ಯ-2017’ ಆಂದೋಲನದ ಅಂಗವಾಗಿ ವನಮಹೋತ್ಸವ, ಪರಿಸರ ಜಾಥಾ, ಮಾನವ ಸರಪಳಿ, ಸಸಿ ನೆಡುವ ಕಾರ್ಯಕ್ರಮ ಹಾಗೂ ಅರಣ್ಯ ಮಿಔತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ವರ್ಷವೂ ಸೇರಿದಂತೆ ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕಾಣಿಸಿಕೊಂಡಿರುವ ಭೀಕರವಾದ ಬರಗಾಲದಿಂದ ಎಚ್ಚೆತ್ತುಕೊಂಡು ಜಲಮೂಲಕ್ಕೆ ಅರಣ್ಯ ಅಭಿವೃದ್ಧಿಯೇ ಬುನಾದಿ ಎಂಬುದನ್ನು ಮನದಟ್ಟು ಮಾಡಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಅರಣ್ಯದಿಂದ ಜೀವಜಲ: ಜೀವಜಲ ಸಿಗುವುದು ಗಿಡ-ಮರಗಳನ್ನು ನೆಟ್ಟಾಗ ಮಾತ್ರ. ಎಲ್ಲಾ ಜೀವಜಲಗಳ ಮೂಲ (ನದಿ, ಹಳ್ಳ, ತೊರೆ, ಹೊಳೆ) ಅರಣ್ಯ ಪ್ರದೇಶವೇ ಆಗಿದೆ. ಈ ಕಾಡನ್ನು ಉಳಿಸುವುದು, ಬೆಳೆಸುವುದು ಕೇವಲ ಇಲಾಖೆಯ ಕರ್ತವ್ಯ ಮಾತ್ರ ಅಲ್ಲ. ಅದು ಸಮಾಜದ ಎಲ್ಲಾ ನಾಗರಿಕರ ಕರ್ತವ್ಯವೂ ಹೌದು ಎಂದರು. ಈ ಬಗ್ಗೆ ಜನಜಾಗೃತಿ ಮೂಡಿಸಲು ‘ನೀರಿಗಾಗಿ ಅರಣ್ಯ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯಾದ್ಯಂತ ಅರಣ್ಯ ಸಂವರ್ಧನಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.ಅರಣ್ಯ ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವ ಅತ್ಯಗತ್ಯ. ಇದಕ್ಕಾಗಿ ವಿವಿಧ ಇಲಾಖೆ ಗಳೊಂದಿಗೆ, ಸರಕಾರೇತರ ಸಂಸ್ಥೆ, ಸಂಘಟನೆಗಳು ಹಾಗೂ ಕಾರ್ಪೋರೇಟ್ ಸಂಸ್ಥೆಗಳ ನೆರವನ್ನೂ ಸಹ ಪಡೆದು ಕೊಳ್ಳುತ್ತೇವೆ ಎಂದರು.
ಅರಣ್ಯ ಪ್ರೋತ್ಸಾಹ ಯೋಜನೆ: ಗಿಡನೆಟ್ಟು, ಗಿಡ ಬೆಳೆಸಿ, ಗಿಡ ಉಳಿಸಿ ಪಾಪದಿಂದ ಮುಕ್ತರಾಗಿ ಎಂಬುದು ನಮ್ಮ ಸ್ಲೋಗನ್ ಆಗಿದೆ. ರೈತರ ಸಹಭಾಗಿತ್ವ ದೊಂದಿಗೆ ಗಿಡನೆಟ್ಟು ಬೆಳೆಸಲು ‘ಅರಣ್ಯ ಕೃಷಿ ಪ್ರೋತ್ಸಾಹ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತನ್ನ ಜಾಗದಲ್ಲಿ ಗಿಡ ನೆಟ್ಟು ಬೆಳೆಸುವ ರೈತನಿಗೆ ಮೊದಲ ವರ್ಷ 30ರೂ., ಎರಡನೇ ವರ್ಷ 30 ಮೂರನೇ ವರ್ಷ 40 ರೂ. (ಒಟ್ಟು ಒಂದು ಮರಕ್ಕೆ 100ರೂ.) ನೀಡುವ ಯೋಜನೆ ಇದಾಗಿದೆ. ಪ್ರತಿಯೊಬ್ಬ ರೈತನೂ ಇದರಲ್ಲಿ ಪಾಲ್ಗೊಳ್ಳಬಹುದು. ಈ ಮೂಲಕ ಜಾಗತಿಕ ತಾಪಮಾನ ತಗ್ಗಿಸಲು ತನ್ನ ಪಾಲಿನ ಕಾಣಿಕೆ ನೀಡಬಹುದು ಎಂದರು. ನರೇಗಾ ಯೋಜನೆಯಲ್ಲೂ ಗಿಡ ನೆಟ್ಟು ಬೆಳೆಸುವುದಕ್ಕೆ ಅಆವಕಾಶವಿದೆ ಎಂದರು.
ಅದೇ ರೀತಿ ಮಕ್ಕಳಲ್ಲೂ ಪರಿಸರ ರಕ್ಷಣೆ, ಮರ ಉಳಿಸುವ ಬಗ್ಗೆ ಜಾಗೃತಿ ಮೂಡಿಸಲು 8-10ನೇ ತರಗತಿ ಮಕ್ಕಳಿಗೆ ‘ಚಿಣ್ಣರ ವನ ದರ್ಶನ’ ಕಾರ್ಯಕ್ರಮ ವಿದೆ. ಇದರಿಂದ ಮಕ್ಕಳು ಪರಿಣಾಮಕಾರಿಯಾಗಿ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸವಿದೆ ಎಂದರು.
ಅರಣ್ಯ ಸುರಕ್ಷತಾ ಕಾಯ್ದೆಯನ್ನು ರಾಜ್ಯದಲ್ಲಿ ಪರಿಣಾಮಕಾಗಿಯಾಗಿ ಜಾರಿಗೊಳಿಸಲಾಗಿದೆ. ಇದರಿಂದ ಅರಣ್ಯೇತರ ಉದ್ದೇಶಗಳಿಗಾಗಿ ಬಳಕೆಯಾಗುವ ಭೂಮಿ ಪ್ರಮಾಣ ಗಣನೀಯವಾಗಿ ತಗ್ಗಿದೆ. ಇದರಿಂದ ರಾಜ್ಯದಲ್ಲಿ ಶೇ.22ರಷ್ಟು ಪ್ರದೇಶ ಅರಣ್ಯ ಪ್ರದೇಶವಾಗಿ ಉಳಿದಿದೆ. ಶೇ.33ರಷ್ಟು ಭಾಗ ಅರಣ್ಯವಿರಬೇಕಾಗಿದ್ದರೂ, ರಾಜ್ಯದ ಸಾಧನೆ ಖಂಡಿತಾ ಉತ್ತಮವಾಗಿದೆ. ನಮ್ಮ ಪ್ರಯತ್ನ ನಿರಂತರವಾಗಿ ಸಾಗಿದೆ ಎಂದರು.
ಕಸ್ತೂರಿರಂಗನ್ ವರದಿ ಬಗ್ಗೆ ರಾಜ್ಯ ಸರಕಾರ ಜನಹಿತ ಗಮನದಲ್ಲಿಟ್ಟುಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಕೇಂದ್ರ ಸರಕಾರದ ಯೋಜನೆಯಾಗದ ಹುಲಿ ಯೋಜನೆಯನ್ನು ಈ ಸರಕಾರ ಮಂಜೂರು ಮಾಡಿದ್ದರೂ, ಸ್ಥಳೀಯ ಜನರ ವಿರೋಧವನ್ನು ಗಮನಿಸಿ ರಾಜ್ಯ ಸರಕಾರ ಅದನ್ನು ಅನುಷ್ಠಾನಗೊಳಿಸಿಲ್ಲ ಎಂದರು.
ರಾಜ್ಯದಲ್ಲಿ ಆರ್ಎಫ್ಓ ತರಬೇತಿ ಸಂಸ್ಥೆಯನ್ನು ಧಾರವಾಡದಲ್ಲಿ ತೆರೆಯಲಾಗಿದೆ. ಅದನ್ನು ಅಕಾಡೆಮಿಯಾಗಿ ಪರಿವರ್ತಿಸಲಾಗಿದೆ. ಅರಣ್ಯ ಪ್ರೇರಕರನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು. ಅವರ ಗೌರವಧನವನ್ನು 5000ರೂ.ನಿಂದ ಈಗ 9,000ರೂ.ಗೆ ಹೆಚ್ಚಿಸಲಾಗಿದೆ. ಶೀಘ್ರವೇ ಅದನ್ನು 10,000ರೂ.ಗೆ ಏರಿಸಲಾಗುವುದು ಎಂದರು.
ಗಂಧದ ಮರವನ್ನು ಉಳಿಸಿ ಬೆಳೆಸಲು ಸಿರಿಚಂದನ ವನವನ್ನು ಬೆಳೆಸಲಾಗುತ್ತಿದೆ. ಉಡುಪಿಯ ವಂಡಾರಿನಲ್ಲಿ ಈಗಾಗಲೇ ಸಿರಿಚಂದನ ವನವನ್ನು ನೈಸರ್ಗಿಕವಾಗಿ ಬೆಳೆಸಲಾಗುತ್ತಿದೆ. ಮಂಗಳೂರಿನ ವೀರಕಂಬದಲ್ಲಿ ದೈವೀವನ ಬೆಳೆಯುತ್ತಿದೆ. ರಾಜ್ಯದ ಒಟ್ಟು 50 ಕಡೆ ‘ಟ್ರೀ ಪಾರ್ಕ್’ಗಳು ತಲೆ ಎತ್ತಲಿವೆ. ಉಡುಪಿ ಬಡಗುಬೆಟ್ಟುನಲ್ಲಿ ಶೀಘ್ರವೇ ಅದು ಉದ್ಘಾಟನೆಗೊಳ್ಳಲಿದೆ ಎಂದರು.
ಡೆಹ್ರಾಡೂನ್ನ ಅರಣ್ಯ ಸಂಶೋಧನಾ ಸಂಸ್ಥೆ, ದೇಶದಲ್ಲಿ ಕರ್ನಾಟಕದಲ್ಲಿ ಅರಣ್ಯ ಕವಚದ ಪ್ರಮಾಣ ಹೆಚ್ಚುತ್ತಿರುವುದನ್ನು ಶ್ಲಾಘಿಸಿದೆ. 28,900 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಕವಚ ವಿಸ್ತರಿಸಿರುವುದನ್ನು ಅದು ಗುರುತಿಸಿದೆ ಎಂದರು.
ನೀರಿಗಾಗಿ ಅರಣ್ಯ ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಜಿಲ್ಲೆಯಲ್ಲಿ ಈ ವರ್ಷ ಕಂಡುಬಂದ ನೀರಿನ ಹಾಹಾಕಾರದಿಂದ ಪಾಠಕಲಿತು ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮಣಿಪಾಲ ವಿವಿಯ ಡಾ.ಜಿ.ಕೆ.ಪ್ರಭು, ಉಡುಪಿ ಜಿಲ್ಲೆ ವನ್ಯಜೀವಿ ಪರಿಪಾಲಕ ಎಂ.ರವಿರಾಜ್ ನಾರಾಯಣ್, ರೋಟರಿ ಜಿಲ್ಲಾ ಕಾರ್ಯದರ್ಶಿ ಪ್ರೊ.ಬಾಲಕೃಷ್ಣ ಮುದ್ದೋಡಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಮಂಗಳೂರು ವಿಭಾಗ ಡಿಎಫ್ಓ ಕಲಿಕಾಳನ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಂದಾಪುರ ವಿಭಾಗ ಉಪ ಅರಣ್ಯ ವಿಭಾಗಾಧಿಕಾರಿ ಎಂ.ವಿ.ಅಮರನಾಥ ಸ್ವಾಗತಿಸಿದರೆ, ಮಂಗಳೂರು ವೃತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಎಸ್. ಬಿಜ್ಜೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು.