ಮಂಗಳೂರು : ತಾಪಂ, ಜಿಪಂ ಚುನಾವಣೆ: ಅಭ್ಯರ್ಥಿಗಳ ಅಭಿಮತ
ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತವರಣವಿತ್ತು. ಆದರೆ ನಾವು ಯಶಸ್ವಿಯಾಗಲಿಲ್ಲ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ 2 ಕ್ಷೇತ್ರದಲ್ಲಿ ಮಾತ್ರ ಸೋಲುಂಟಾಗಿದೆ . ಉಳಿದ ಕ್ಷೇತ್ರಗಳಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿದೆ.ಪಕ್ಷಕ್ಕೆ ಸೋಲು ಅನುಭವಿಸಲು ಕಾರಣವೇನು ಎಂಬ ಬಗ್ಗೆ ಪಕ್ಷದ ಮುಖಂಡರುಗಳು, ಸಚಿವರುಗಳು ಆತ್ಮಾವಲೋಕನ ಮಾಡಿಕೊಂಡು ಮುಂದೆ ಸರಿಪಡಿಸಲಿದ್ದೇವೆ. ವಿಜಯಿಯಾದ ಎಲ್ಲಾ ಪಕ್ಷದ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಅಭಿವೃದ್ದಿ ಕಾಮಾಗಾರಿಗಳಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡುತ್ತದೆ.
-ಯು.ಟಿ.ಖಾದರ್, ಆರೋಗ್ಯ ಸಚಿವ
ಎಲ್ಲಾ ಮತದಾರರು ನನ್ನನ್ನು ಆಶಿರ್ವದಿಸಿದ್ದಾರೆ. ಗುರುಪುರ ಗ್ರಾಮಪಂಚಾಯತ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಅನುಭವವಿದ್ದು ಮುಂದೆ ಗುರುಪುರ ಕ್ಷೇತ್ರವ್ಯಾಪ್ತಿಯ ಅಭಿವೃದ್ದಿ ಕಾಮಾಗಾರಿಯನ್ನು ನಡೆಸುತ್ತೇನೆ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಮೂಡುಶೆಡ್ಡೆ, ಪಡುಶಧೆಡ್ಡೆ, ಗುರುಪುರ ಮುಂತಾದೆಡೆ ಇರುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ.
- ಯು.ಪಿ. ಇಬ್ರಾಹೀಂ, ಗುರುಪುರ ಜಿ.ಪಂ ಕ್ಷೇತ್ರದ ಕಾಂಗ್ರೆಸ್ ವಿಜಯಿ ಅಭ್ಯರ್ಥಿ
ಕ್ಷೇತ್ರ ವ್ಯಾಪ್ತಿಯಲ್ಲಿರುವ ಸಮಸ್ಯೆ ಪರಿಹರಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಹಿಂದೆ ತಾ.ಪಂ ಸದಸ್ಯನಾಗಿ ಅನುಭವ ಹೊಂದಿದ್ದು ಕ್ಷೇತ್ರದ ಮೂಲಸೌಕರ್ಯಕ್ಕೆ ಒತ್ತು ನೀಡಿ ಅಭಿವೃದ್ದಿ ಕಾರ್ಯ ನಡೆಸಲಾಗುವುದು.
- ವಿನೋದ್ ಕುಮಾರ್ ಬೊಳ್ಳೂರು, ಕಿನ್ನಿಗೋಳಿ ಜಿ.ಪಂ ಕ್ಷೇತ್ರದ ಬಿಜೆಪಿ ವಿಜಯಿ ಅಭ್ಯರ್ಥಿ
ಕಳೆದ ಹನ್ನೊಂದು ವರ್ಷಗಳಿಂದ ಪ್ರಜ್ಞಾ ಕೌನ್ಸಿಲಿಂಗ್ ಮೂಲಕ ಸಾಮಾಜಿಕ ಸೇವೆ ಮಾಡಿದ್ದ ನನಗೆ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಟಿಕೇಟ್ ನೀಡಿ ಜಿ.ಪಂ ಸದಸ್ಯಳನ್ನಾಗಿ ಆಯ್ಕೆ ಮಾಡಿದೆ. ಪಕ್ಷದ ನಾಯಕರು, ಕಾರ್ಯಕರ್ತರಿಗೆ ನಾನು ಚಿರಋಣಿಯಾಗಿದ್ದೇನೆ
-ಧನಲಕ್ಷ್ಮೀ, ಸೋಮೇಶ್ವರ ಜಿ.ಪಂ ಕ್ಷೇತ್ರದ ಬಿಜೆಪಿ ವಿಜಯಿ ಅಭ್ಯರ್ಥಿ
ನಾನು ಈ ಹಿಂದೆ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕೆಲಸವನ್ನು ಪರಿಗಣಿಸಿ ನನ್ನ ಪತ್ನಿ ಸೀಮಾ ಮೆಲ್ವಿನ್ ಅವರನ್ನು ಕ್ಷೇತ್ರದ ಜನತೆ ಗೆಲ್ಲಿಸಿದ್ದಾರೆ.ರಾಜಕೀಯ ಅನುಭವ ಇಲ್ಲದೆ ಇದ್ದರೂ ಮುಂದೆ ಈ ಬಗ್ಗೆ ತಿಳಿದುಕೊಂಡು ಕ್ಷೇತ್ರದ ಅಭಿವೃದ್ದಿ ಕಾರ್ಯ ನಡೆಸಲಿದ್ದಾರೆ. ವೈಸಿಎಸ್, ಐಸಿವೈಎಂನಲ್ಲಿ ದುಡಿದ ಅನುಭವವಿದೆ. ಇದೀಗ ಅವರಿಗೆ ಕ್ಷೇತ್ರದ ಅಭಿವೃದ್ದಿ ಕಾರ್ಯ ಮಾಡುವ ಅವಕಾಶ ಸಿಕ್ಕಿದೆ.
-ಮೆಲ್ವಿನ್ ಡಿಸೋಜ, ನೀರುಮಾರ್ಗ ಮಾಜಿ ಜಿ.ಪಂ ಸದಸ್ಯ
ತಾ.ಪಂ ಕ್ಷೇತ್ರದಲ್ಲಿ 947 ಮತಗಳ ಅಂತರದಿಂದ ವಿಜಯಿಯಾಗಿದ್ದೇನೆ. ಪಕ್ಷದ ಕಾರ್ಯಕರ್ತರು, ಮತದಾರರು ಸೇರಿಕೊಂಡು ನನ್ನನ್ನು ವಿಜಯಿಯಾಗಿಸಿದ್ದಾರೆ. ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಒತ್ತು ನೀಡಲಾಗುವುದು.
- ಅಬೂಬಕ್ಕರ್ ಸಿದ್ದಿಕ್ ,ತಲಪಾಡಿ ತಾ.ಪಂ ವಿಜೇತ ಕಾಂಗ್ರೆಸ್ ಅಭ್ಯರ್ಥಿ
ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಸಾಧಿಸಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಶಾಸಕರು ಆಯ್ಕೆ ಮಾಡುವ ಗುರಿ ಹೊಂದಿದ್ದೇವೆ. ಕ್ರೀಯಾಶೀಲ ಸಂಸದರಿಂದ ನಮ್ಮ ಗೆಲುವು ಸಾಧ್ಯವಾಗಿದೆ.
-ಸುಚರಿತ ಶೆಟ್ಟಿ, ಪುತ್ತಿಗೆ ಜಿ.ಪಂ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ
ದ.ಕ ಜಿಲ್ಲಾ ಪಂಚಾಯತ್ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಬಿಜೆಪಿ ಸಾಧನೆೆಯಲ್ಲ. ಈ ಹಿಂದೆ 11 ಸ್ಥಾನದಲ್ಲಿ ಗೆದ್ದಿದ್ದ ಕಾಂಗ್ರಸ್ ಈ ಬಾರಿ 15 ಸ್ಥಾನ ಗಳಿಸಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಲವು ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳ ಆಯ್ಕೆ ಸರಿಯಾಗಿ ನಡೆಯದೆ ಇರುವುದು ಕೆಲವು ಕ್ಷೇತ್ರಗಳಲ್ಲಿ ಪಕ್ಷ ಸೋಲನ್ನನುಭವಿಸಿದೆ. ಒಂದು ಕ್ಷೇತ್ರದಲ್ಲಿ 13 ಮತಗಳ ಅಂತರದಲ್ಲಿ ಸೋತಿದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಬಿಜೆಪಿ ಪ್ರಾಬಲ್ಯ ಹೊಂದಿರುವ ಪ್ರದೇಶದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಮಂಗಳೂರು ತಾ.ಪಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಸಂತಸ ತಂದಿದೆ. ತಾ.ಪಂನಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಲಾಗುವುದು. ಕಾಂಗ್ರೆಸ್ ಜಿ.ಪಂ ನಲ್ಲಿ ಸೋಲು ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಪಾಠ. ಸೋಲಿನ ಬಗ್ಗೆ ಆತ್ಮವಲೋಕನ ಸಭೆ ನಡೆಸಲಾಗುವುದು.
-ಮೊಯ್ದಿನ್ ಬಾವ, ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ