ರಾ.ಹೆ.169ರ ಅಭಿವೃದ್ಧಿ ಬಗ್ಗೆ ಐವನ್ ಡಿಸೋಜ ಚರ್ಚೆ
ಮಂಗಳೂರು, ಅ.5: ರಾ.ಹೆ. 169ರ ಅಗಲೀಕರಣ ಮತ್ತು ಭೂ-ಸ್ವಾಧೀನ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಹಾಗೂ ಪ್ರಸಾವ ಬಗ್ಗೆ ಕೇಂದ್ರ ಸರಕಾರದ ಯೋಜನಾ ಅಧಿಕಾರಿ ಸೋಮ್ಶೇಖರ್ ಮತ್ತು ಇತರ ಇಲಾಖಾ ಅಧಿಕಾರಿಗಳಿಗೆ ರಾಜ್ಯ ವಿಧಾನ ಪರಿಷತ್ನ ಮುಖ್ಯಸಚೇತಕ ಐವನ್ ಡಿಸೋಜ ನಿರ್ದೇಶನ ನೀಡಿದರು.
ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರದಿಂದ ಬೆಳುವಾಯಿ ಮಧ್ಯದ ಚಥುಷ್ಪಥ ರಸ್ತೆ ನಿರ್ಮಾಣದ ಬಗ್ಗೆ ಇನ್ನು ಗೊಂದಲದ ವಾತಾವರಣವಿದೆ. ರಾಷ್ಟ್ರೀಯ ಹೆದ್ದಾರಿ 169ನ್ನು ಯಾವ ಕಡೆಯಿಂದ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವ ಕೂಡ ಅಂತಿಮಗೊಂಡಿಲ್ಲ. ಹಳೆಯ ರಾಷ್ಟ್ರೀಯ ಹೆದ್ದಾರಿ ದುರಸ್ಥಿಯಾಗದೆ ಪ್ರಸ್ತುತ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮತ್ತು ಜನರಿಗೆ ಅಲೆದಾಡಲು ತೊಂದರೆ ಉಂಟಾಗಿದ್ದು ಕೂಡಲೇ ಅದರ ದುರಸ್ಥಿ ಕೆಲಸವನ್ನು ಕೈಗೊಳ್ಳಬೇಕು ಎಂದು ಐವನ್ ಡಿಸೋಜ ಸೂಚಿಸಿದರು.
ಸಾರ್ವಜನಿಕರಿಂದ ಅದಾಲತ್ ಮೂಲಕ ದೂರು ಸ್ವೀಕರಿಸಿ ಚಥುಷ್ಪಥ ರಸ್ತೆಯ ಕಾಮಗಾರಿಯನ್ನು ಪ್ರಾರಂಭಿಸಲು ಹೆದ್ದಾರಿ ಪ್ರಾಧೀಕಾರ ಮುಂದಾಗಬೇಕು. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 13ರ ದುರಸ್ಥಿಗೆ 1.2 ಕೋ.ರೂ. ಅನುದಾನದ ಆವಶ್ಯಕತೆಯ ಬೇಡಿಕೆಯನ್ನು ಅಧಿಕಾರಿಗಳು ನೀಡಿದೆ. ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಹದಗೆಟ್ಟ ರಸ್ತೆಯ ಕಾಮಗಾರಿಯನ್ನು ಆರಂಭಿಸಲು ಸೂಚಿಸಿದರು.
ರಾ.ಹೆ. 169ರ ಬೈಪಾಸ್ರೋಡ್ಗಳ ಬಗ್ಗೆ ಗುರುಪುರ, ಕೈಕಂಬ, ಮೂಡುಬಿದಿರೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಸಾರ್ವಜನಿಕರ ಆಕ್ಷೇಪಣೆಯ ಜೊತೆಗೆ ಅದಾಲತ್ ಮುಖಾಂತರ ಸಂಪೂರ್ಣ ಪ್ರಾಜೆಕ್ಟ್ ವರದಿ ತಯಾರಿಸಿ ಚಥುಷ್ಪಥ ಹೆದ್ದಾರಿ ಕಾಮಗಾರಿಯನ್ನು ಪ್ರಾರಂಭಿಸಲು ಐವನ್ ಡಿಸೋಜ ತಿಳಿಸಿದರು.