ಪ್ರತ್ಯೇಕ ಕೊಡವ ರಾಜ್ಯ ರಚನೆ ಖಚಿತ: ಸುಬ್ರಮಣಿಯನ್ ಸ್ವಾಮಿ
27ನೇ ಕೊಡವ ನ್ಯಾಷನಲ್ ಡೇ
ಮಡಿಕೇರಿ, ನ.26: ಸಣ್ಣ ಸಣ್ಣ ರಾಜ್ಯಗಳ ರಚನೆಯಿಂದ ದೇಶದಲ್ಲಿ ನೆಲೆಸಿರುವ ಸಣ್ಣಪುಟ್ಟ ಜನಾಂಗಗಳ ಭಾಷೆ, ಸಂಸ್ಕೃತಿ ಮತ್ತು ಮೂಲ ನೆಲೆಗಳ ಅಭಿವೃದ್ಧಿ ಸಾಧ್ಯ. ಭವಿಷ್ಯದಲ್ಲಿ ತೆಲಂಗಾಣ ಹಾಗೂ ಉತ್ತರಾಖಂಡ್ ಮಾದರಿಯಲ್ಲಿ ಪ್ರತ್ಯೇಕ ಕೊಡವ ರಾಜ್ಯ ರಚನೆಯಾಗಲಿದೆ ಎನ್ನುವ ಮೂಲಕ ರಾಜ್ಯ ಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಪ್ರತ್ಯೇಕ ಕೊಡವ ರಾಜ್ಯ ಸ್ಥಾಪನೆಯ ಮಾತುಗಳನ್ನಾಡಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ನಡೆದ ಕೊಡವ ನ್ಯಾಷನಲ್ ಕೌನ್ಸೆಲ್ನ 27ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಿಎನ್ಸಿ ಬೇಡಿಕೆಗಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದ ಅವರು, ಕೊಡವ ಬುಡಕಟ್ಟು ಜನಾಂಗ ಎಂದು ಘೋಷಿಸಬೇಕು. ಕೊಡವ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆನ್ನುವ ಬೇಡಿಕೆಗೆ ಆದ್ಯತೆ ನೀಡಲಾಗುವುದು ಎಂದರು.
ಕೊಡವರು ಹಿಂದೂಗಳೇ ಆಗಿದ್ದು, ಸಣ್ಣ ಸಮುದಾಯವಾದರೂ ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ರಾಷ್ಟ್ರೀಯತೆ ಮೆರೆದಿದ್ದಾರೆ. ಕೊಡವ ಮಹಿಳೆಯರೂ ಪುರುಷ ಸಮಾನರಂತೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ತಮ್ಮ ಸಂಘಟನೆಯ ಹಕ್ಕೋತ್ತಾಯಗಳನ್ನು ಮಂಡಿಸಿ ಕಳೆದ 26 ವರ್ಷಗಳಿಂದ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ. ಬೇಡಿಕೆ ಈಡೇರುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದರು.
ಸಮಾರಂಭದಲ್ಲಿ ಅಖಿಲ ಭಾರತ ವಿರಾಟ್ ಹಿಂದು ಸಂಗಮ್ನ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಮಾತನಾಡಿದರು.
ಮಾಜಿ ಸಚಿವ ಚಿದಂಬರಂಗೆ ಚಾಟಿ:
ಕೊಡಗು ಜಿಲ್ಲೆಗೆ ಸಾಕಷ್ಟು ಕಪ್ಪುಹಣ ಹರಿದು ಬಂದಿದೆ ಮತ್ತು ಬರುತ್ತಿದೆ. ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರು ಕೂಡ ಇಲ್ಲಿ ಆಸ್ತಿ ಹೊಂದಿದ್ದಾರೆ. ಪ್ರತ್ಯೇಕ ಕೊಡವ ಲ್ಯಾಂಡ್ ರಚನೆಯಾದರಷ್ಟೆ ಕಪ್ಪುಹಣದ ಕುಳಗಳನ್ನು ಜೈಲಿಗಟ್ಟಬಹುದು ಎಂದು ಚಿದಂಬರಂ ವಿರುದ್ಧ ಕಿಡಿಕಾರಿದ ಸುಬ್ರಹ್ಮಣ್ಯನ್ ಸ್ವಾಮಿ, ಕೊಡವರು ತಮ್ಮ ಜನ್ಮ ಭೂಮಿಯನ್ನು ಉಳಿಸಿಕೊಳ್ಳಬೇಕೆಂದು ಕರೆ ನೀಡಿದರು.