ಕೋಮುವಾದವನ್ನು ಧಿಕ್ಕರಿಸಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು: ಬಿ.ಬಿ.ನಿಂಗಯ್ಯ
ಮೂಡಿಗೆರೆ, ಡಿ. 6: ದಲಿತರಿಗೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದೇಶದಲ್ಲಿ ಕೋಮುವಾದವನ್ನು ಧಿಕ್ಕರಿಸಿ ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಬುಧವಾರ ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಜಾತಿ ವ್ಯವಸ್ಥೆ ತೊಲಗಿ ಎಲ್ಲಾ ಧರ್ಮೀಯರು ಒಂದಾಗಿ ಬಾಳುವಂತಾಗಬೇಕು ಎಂದು ಬಲವಾಗಿ ನಂಬಿದ್ದ ಅಂಬೇಡ್ಕರ್, ಜಾತಿ ವ್ಯವಸ್ಥೆಯ ದೌರ್ಜನ್ಯದಿಂದ ಮುಕ್ತಿ ದೊರಕಿಸಲು ತಮ್ಮ ಜೀವನದುದ್ದಕ್ಕೂ ಹೋರಾಟವನ್ನು ರೂಪಿಸಿದ್ದರು. ಆದರೆ ಅದು ಸಾದ್ಯವಾಗದೆ ಜಾತಿ ವ್ಯವಸ್ಥೆ ಮತ್ತಷ್ಟು ಬಲಗೊಂಡಾಗ ವ್ಯವಸ್ಥೆ ಬದಲಾಗದು. ತಾನೇ ಬದಲಾಗುತ್ತೇನೆ ಎಂದು ತಮ್ಮ ಅನುಯಾಯಿಗಳನ್ನು ಕರೆದೊಯ್ದು ಬೌದ್ಧ ಧರ್ಮಕ್ಕೆ ಸೇರ್ಪಡೆಯಾದರು ಎಂದು ಹೇಳಿದರು.
ಈ ಸಂದರ್ಭ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಬ್ಬಳ್ಳಿ ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಈಪಂ ಸದಸ್ಯ ನಿಖಿಲ್ ಚಕ್ರವರ್ತಿ, ಎಸ್ಸಿ ವಿಭಾಗದ ಅಧ್ಯಕ್ಷ ಲಕ್ಷ್ಮಣ್, ಚಿಕ್ಕಮಗಳೂರು ತಾಪಂ ಸದಸ್ಯ ಮಹೇಶ್ ಕಂಚೇನಹಳ್ಳಿ, ಮುಖಂಡರಾದ ಎಂ.ಎ.ಹಮ್ಮಬ್ಬ, ರಾಮಪ್ಪ, ಸಬ್ಬೀರ್ ಅಹಮ್ಮದ್ ಬೇಗ್, ವಾಜೀದ್, ನಾಸೀರ್, ಸುರೇಶ್, ಬೆಟ್ಟಗೆರೆ ಮಂಜು ಮತ್ತಿತರಿದ್ದರು.