ಅಮಿತ್ ಶಾ ಆಟ ಕರ್ನಾಟಕದಲ್ಲಿ ನಡೆಯಲ್ಲ: ಸಿಎಂ ಸಿದ್ದರಾಮಯ್ಯ
ಮಡಿಕೇರಿ, ಜ.10 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ 23 ಸೂತ್ರದ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇಂದು ಮಡಿಕೇರಿಯಿಂದ ಚಾಮರಾಜನಗರದತ್ತ ಹೆಲಿಕಾಪ್ಟರ್ ನಲ್ಲಿ ಪ್ರಯಾಣ ಬೆಳೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದು ಕರ್ನಾಟಕ, ಉತ್ತರ ಪ್ರದೇಶ ಅಲ್ಲ ಎನ್ನುವುದನ್ನು ಮೊದಲು ಅಮಿತ್ ಶಾ ತಿಳಿಯಬೇಕು ಎಂದರು. ನಾನು ಹಾಗೂ ಸಿದ್ದರಾಮಯ್ಯ ಅಣ್ಣ ತಮ್ಮ ಎಂದು ಪರಮೇಶ್ವರ್ ಅವರು ಹೇಳಿಕೊಂಡಿರುವ ಮಾತು ಸತ್ಯವಾಗಿದ್ದು, ವೈಜನಾಥ್ ಪಾಟೀಲ್ ಏಕವಚನದಲ್ಲಿ ಮಾತನಾಡಿರುವ ವಿಚಾರದ ಬಗ್ಗೆ ಪರಿಶಿಲಿಸುತ್ತೇನೆ ಎಂದರು.
ಆದಿತ್ಯನಾಥ್ ಅವರಿಗೆ ನಾನು ಮಹತ್ವ ನೀಡಲ್ಲ, ಅವರ ಹೇಳಿಕೆಗೆ ಪ್ರತಿಕ್ರೀಯೆ ನೀಡಿದ್ದೇನೆ ಅಷ್ಟೇ. ಉತ್ತರ ಪ್ರದೇಶದ ಮುಖ್ಯಮಂತ್ರಿ ನನ್ನ ಬಗ್ಗೆ ಹೇಳಿಕೆ ನೀಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ್ದೇನೆಯೇ ಹೊರತು ಅವರಿಗೆ ಮಹತ್ವ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಭೂಗತ ಪಾತಕಿ ರವಿ ಪೂಜಾರಿಯಿಂದ ಶಿಕ್ಷಣ ಸಚಿವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ತನ್ವೀರ್ ಸೇಠ್ ಅವರಿಗೆ ಬಂದಿರುವ ಕರೆಯ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು. ಅಮಿತ್ ಶಾ ರೆಸಾರ್ಟ್ಗೆ ಬಂದಾಗ ನಾಗರಹಾವು ಪ್ರತ್ಯಕ್ಷವಾಗಿರುವುದು ಅಶುಭದ ಸಂಕೇತ ಎಂದು ಜ್ಯೋತಿಷಿಗಳು ಹೇಳಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, ನಾನು ಶುಭ ಅಶುಭದ ಬಗ್ಗೆ ನಂಬುವುದೇ ಇಲ್ಲ, ಅದಕ್ಕೆ ಪ್ರತಿಕ್ರಿಯೆ ಕೂಡಾ ನೀಡಲ್ಲ ಎಂದರು.
ಕಾರ್ಯಪ್ಪರಿಗೆ ಭಾರತ ರತ್ನ: ರಾಷ್ಟ್ರದ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪೊನ್ನಂಪೇಟೆ ಮತ್ತು ಕುಶಾಲನಗರ ತಾಲೂಕು ರಚನೆ ಸಂಬಂಧ ಪರಿಶೀಲಿಸಲಾಗುವುದು. ಕೊಡವ ಸಮಾಜಗಳಿಂದ ನಡೆಯುವ ಹಾಕಿ ಕ್ರೀಡಾಕೂಟಕ್ಕೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಇತರರು ಹಾಜರಿದ್ದರು.