ತುಂಗಭದ್ರಾ ಬಳಿ ಪರ್ಯಾಯ ಜಲಾಶಯ: ಎಂ.ಬಿ.ಪಾಟೀಲ್
ಬೆಂಗಳೂರು, ಮಾ.14: ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯುವ ಬದಲುಪರ್ಯಾಯ ಜಲಾಶಯಗಳನ್ನು ನಿರ್ಮಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಜಲಸಂಪ ನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯವು 64 ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಪ್ರತಿ ವರ್ಷ ಸರಾಸರಿ ಅರ್ಧ ಟಿಎಂಸಿಯಂತೆ ಸುಮಾರು 32 ಟಿಎಂಸಿ ಹೂಳು ಸಂಗ್ರಹವಾಗಿರುವ ಅಂದಾಜಿದೆ ಎಂದರು.
ಹೂಳು ತೆಗೆಯಲು ಟೆಂಡರ್ ಕರೆಯಲಾಗಿತ್ತು. ಆದರೆ, ಇಷ್ಟೊಂದು ಪ್ರಮಾಣದ ಹೂಳು ತೆಗೆಯುವುದು ಸುಲಭದ ಕೆಲಸವಲ್ಲ. 32 ಟಿಎಂಸಿ ಹೂಳನ್ನು ತೆಗೆದು ಬೇರೆಡೆ ಸಾಗಿಸಿ ಅದನ್ನು ಸಂಗ್ರಹಿಸಲು ಸುಮಾರು 50 ಸಾವಿರ ಎಕರೆ ಪ್ರದೇಶ ಬೇಕಾಗುತ್ತದೆ ಎಂದು ಅವರು ಹೇಳಿದರು. ಆದುದರಿಂದ, ಹೂಳು ತೆಗೆಯುವ ಬದಲು ನವಿಲೆ ಬಳಿ ಪರ್ಯಾಯ ಅಣೆಕಟ್ಟು ನಿರ್ಮಿಸುವುದು, ಗುರುತ್ವಾಕರ್ಷಣೆ ನಿಯಮ ಅನುಸರಿಸಿ ನೀರು ಹರಿಸುವುದು ಅಥವಾ ಸಿಂಗಟಾಲೂರು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಆಯ್ಕೆಗಳು ನಮ್ಮ ಮುಂದಿದ್ದು, ಮಳೆಗಾಲದ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ನವಿಲೆ ಬಳಿ ಅಣೆಕಟ್ಟು ನಿರ್ಮಾಣಕ್ಕೆ ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಎದುರಾಗುವುದಿಲ್ಲ. ಸಿಂಗಟಾಲೂರು ಬಳಿ ಅಣೆಕಟ್ಟು ನಿರ್ಮಿಸಲು ಮುಂದಾದರೆ ಆಂಧ್ರಪ್ರದೇಶದಿಂದ ಆಕ್ಷೇಪ ಬರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ. ಆದುದರಿಂದ, ಈ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ದೇವೇಗೌಡರಿಗೆ ತಿರುಗೇಟು: ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರಕಾರ ಆಸಕ್ತಿ ಹೊಂದಿದೆ. ಈ ಸಂಬಂಧ ತಜ್ಞರು ವರದಿಯನ್ನು ಸಿದ್ಧಪಡಿಸುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪ್ರಾಥಮಿಕ ವರದಿ ನಮ್ಮ ಕೈಸೇರಲಿದೆ. ಆನಂತರ, ಈ ಯೋಜನೆಗೆ ಅನುಮತಿ ಲಭ್ಯವಾಗುವ ರೀತಿಯಲ್ಲಿ ಅಗತ್ಯವಾದ ಮಾಹಿತಿ, ದಾಖಲೆಗಳನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಎಚ್.ಡಿ.ದೇವೇಗೌಡರು, ರಾಜ್ಯದಲ್ಲಿ ನೀರಾವರಿ ಸಚಿವ, ಮುಖ್ಯಮಂತ್ರಿಯಾಗಿದ್ದವರು. ಮೇಕೆದಾಟು ಯೋಜನೆಗೆ ಸಂಬಂಧಿಸಿದ ವರದಿಯನ್ನು ಝೆರಾಕ್ಸ್ ಕಾಪಿ ಕೊಟ್ಟು ರಾತ್ರೋ ರಾತ್ರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲು ಸಾಧ್ಯವಿಲ್ಲ. ಈ ವಿಷಯವನ್ನು ದೇವೇಗೌಡರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿರುಗೇಟು ನೀಡಿದರು.
ಮಹಾರಾಷ್ಟ್ರದ ಕೊಯ್ನ ಅಣೆಕಟ್ಟಿನಲ್ಲಿ ನೀರಿಲ್ಲ. ಇದರಿಂದಾಗಿ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನೀರು ಸಿಗುವುದು ಕಷ್ಟವಾಗಲಿದೆ. ಆದುದರಿಂದ, ಪರ್ಯಾಯ ಮೂಲಗಳಿಂದ ನೀರು ಪೂರೈಕೆ ಮಾಡಲು ಚಿಂತನೆ ನಡೆದಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಹನಿ ನೀರಾವರಿ: ನಾಲೆಗಳ ಮೂಲಕ ಹರಿಯುವ ನೀರನ್ನು ಕಬ್ಬು ಬೆಳೆಗಾಗಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಾಗಲಕೋಟೆ ಜಿಲ್ಲೆಯ ರಾಮಥಾಳ ಸಮೀಪ 25 ಸಾವಿರ ಹೆಕ್ಟೇರ್ ಜಮೀನಿಗೆ ಹನಿ ನೀರಾವರಿ ಮೂಲಕ ನಿರನ್ನು ಒದಗಿಸುವ ಯೋಜನೆ ಪೂರ್ಣಗೊಂಡಿದ್ದು, ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.