ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಕಾಶ್ ರೈ ಮಾನನಷ್ಟ ಮೊಕದ್ದಮೆ
ಮೈಸೂರು, ಫೆ. 27: ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ನಟ ಪ್ರಕಾಶ್ ರೈ 4ನೆ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ವಕೀಲ ಮಹದೇವಸ್ವಾಮಿ ಅವರ ಮೂಲಕ ದಾಖಲಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ತಮ್ಮ ಮೈಸೂರಿನ ಕಚೇರಿಯಲ್ಲಿ ಪ್ರಕಾಶ್ ರೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಗನ ಸಾವು ಸಂಭವಿಸಿದ್ದರೂ ಇನ್ನೊಬ್ಬಳ ಜೊತೆ ಮಗಲಿದ್ದ ವ್ಯಕ್ತಿ ಎಂದು ಪ್ರಕಾಶ್ ರೈ ಕುರಿತು ಟೀಕಿಸಿದ್ದರು. ಸಂಸದರ ಕಚೇರಿ ದೇವರಾಜ ಠಾಣಾ ವ್ಯಾಪ್ತಿಗೆ ಬರುತ್ತದೆ. ಈ ಠಾಣೆಯ ಪ್ರಕರಣಗಳು ನಾಲ್ಕನೇ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತವೆ. ಈ ಕಾರಣಕ್ಕೆ ಮೈಸೂರಿನ ಜೆಎಂಎಫ್ಸಿ ಕೋರ್ಟ್ನಲ್ಲಿ ಐಪಿಸಿ ಸೆಕ್ಷನ್ 499, 500, 503 ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದ್ದು, 1 ರೂಪಾಯಿ ಪರಿಹಾರ ಕೋರಿಕೆ ಮಾಡಲಾಗಿದೆ.
ನಂತರ ಮಾತನಾಡಿ, 'ಅಕ್ಟೋಬರ್ 2 ರಂದು ಸಂಸದ ಪ್ರತಾಪ್ ಸಿಂಹ ನನ್ನ ಬಗ್ಗೆ ಅವಹೇಳನವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ವಿಚಾರವಾಗಿ ಶೋಕಾಷ್ ನೋಟಿಸ್ ನೀಡಲಾಗಿತ್ತು. 10 ದಿನಗಳಲ್ಲಿ ಈ ಬಗ್ಗೆ ಉತ್ತರ ನೀಡುವಂತೆ ಹೇಳಿದ್ದೆವು. ಆದರೆ ಇದಕ್ಕೆ ಸ್ಪಂದಿಸದ ಹಿನ್ನಲೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ' ಎಂದು ನಟ ಪ್ರಕಾಶ್ ರೈ ಹೇಳಿಕೆ ನೀಡಿದರು.
ಬೇರೆ ಯಾರೇ ಆದರೂ ಟೀಕೆ ಮಾಡುವವರ ಮೇಲೆ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ ಅವರು, ಒಂದು ರೂಪಾಯಿ ಪರಿಹಾರದ ಗುಟ್ಟು ಮಾತ್ರ ಬಿಟ್ಟು ಕೊಡಲಿಲ್ಲ ಮತ್ತು ನಗುತ್ತಲೇ ಒಂದು ರೂ. ಒಂದು ರೂ. ಎಂದು ಕೂಗಿದರು.