ಬಾಗೇಪಲ್ಲಿ: ಹಳ್ಳಕ್ಕೆ ಬಿದ್ದ ಕೆಎಸ್ಆರ್ ಟಿಸಿ ಬಸ್: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಬಾಗೇಪಲ್ಲಿ,ಮಾ.3: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕೆಎಸ್ಆರ್ ಟಿಸಿ ಬಸ್ ಹಳ್ಳಕ್ಕೆ ಬಿದ್ದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಹೊರವಲಯದ ರಾ.ಹೆ.7ರ ಪಾಲಿಟೆಕ್ನಿಕ್ ಕಾಲೇಜ್ ಬಳಿ ನಡೆದಿದೆ.
ಬಸ್ ಚಿಕ್ಕಬಳ್ಳಾಪುರದ ಕಡೆಯಿಂದ ಬಾಗೇಪಲ್ಲಿಗೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಇರುವ ಹಳ್ಳಕ್ಕೆ ಬಿದ್ದಿದೆ. ಪರಿಣಾಮ ಬಸ್ನಲ್ಲಿದ್ದ ಕೆಲ ಪ್ರಯಾಣಿಕರಲ್ಲಿ ಬಸ್ನ ಮುಂದಿನ ಗ್ಲಾಸ್ನಿಂದ ಹೊರಗೆ ಬಿದ್ದಿದ್ದಾರೆ.
ಬಸ್ನಲ್ಲಿ ಪ್ರಾಯಾಣಿಸುತ್ತಿದ್ದ ನರಸಿಂಹಪ್ಪ, ನಾರಾಯಣಸ್ವಾಮಿ, ಗಂಗಿರೆಡ್ಡಿ ಸೇರಿದಂತೆ ಬಸ್ ಚಾಲಕನಿಗೆ ಅಲ್ಪ ಗಾಯಗಳಾಗಿದ್ದು, ಕೆಪಿಟಿಸಿಎಲ್ ನೌಕರರಾಗಿರುವ ರವಿಚಂದ್ರ ಮತ್ತು ಗಂಗಮ್ಮ ಎಂಬುವವರು ತೀವ್ರ ಗಾಯಗೊಂಡಿದ್ದಾರೆ. ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಾಗೇಪಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.