ಆನೇಕಲ್: ಪಿಝ್ಝಾ ಹಟ್ ಗೆ ನುಗ್ಗಿದ ಮುಸುಕುಧಾರಿಗಳಿಂದ ಇರಿತ; ಯುವಕ ಮೃತ್ಯು
ಸಮೀರ್
ಆನೇಕಲ್, ಎ. 10: ಇಲ್ಲಿನ ಹೆದ್ದಾರಿಯ ಪಿಝ್ಝಾ ಹಟ್ ಗೆ ಮುಸುಕುಧಾರಿಗಳು ದಾಳಿ ನಡೆಸಿ, ಚೂರಿಯಿಂದ ಇರಿದ ಪರಿಣಾಮ ಯುವಕ ಮೃತಪಟ್ಟ ಘಟನೆ ತಡರಾತ್ರಿ ನಡೆದಿದೆ.
ಒಡಿಶಾ ಮೂಲದ ಸಮೀರ್ (26) ಎಂಬವರು ಇರಿತದಿಂದ ಗಾಯಗೊಂಡು ಮೃತಪಟ್ಟವರು ಎಂದು ತಿಳಿದುಬಂದಿದೆ. ಹೆಬ್ಬಗೋಡಿ-ಚಂದಾಪುರ ಹೆದ್ದಾರಿಯ ಪಿಝಾಹಟ್ ನಲ್ಲಿ ಈ ಘಟನೆ ನಡೆದಿದೆ.
ಕೈಯಲ್ಲಿ ಲಾಂಗ್, ಚೂರಿ ಬ್ಯಾಗ್ ಸಮೇತ ಪಿಝ್ಝಾ ಹಟ್ಗೆ ನುಗ್ಗಿದ ದುಷ್ಕರ್ಮಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ಈ ಸಂದರ್ಭ ತಡೆಯಲು ಬಂದ ಸಮೀರ್ ಅವರಿಗೆ ಚೂರಿಯಿಂದ ಇರಿದು ಗಾಯಗೊಳಿಸಿ, 38 ಸಾವಿರ ರೂ. ನಗದು ದೋಚಿ ದುಷ್ಕರ್ಮಿಗಳು ಪರಾರಿಯಾದರು ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡ ಸಮೀರ್ ರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದು, ಚೂರಿ ಇರಿತದ ಭೀತಿಗೆ ಹೃದಯಾಘಾತವಾಗಿದ್ದೇ ಸಾವಿಗೆ ಕಾರಣ ಎಂದು ಆಸ್ಪತ್ರೆಯ ವೈದ್ಯರ ತಂಡ ತಿಳಿಸಿರುವುದಾಗಿ ಮಾಹಿತಿ ದೊರಕಿದೆ.
ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story