ಕೈ ತಪ್ಪಿದ ಸಚಿವ ಸ್ಥಾನ: ಪಕ್ಷೇತರ ಶಾಸಕ ನಾಗೇಶ್ ಅಸಮಾಧಾನ
ಬೆಂಗಳೂರು, ಜೂ.6: ಸಚಿವ ಸ್ಥಾನ ವಂಚಿತ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ನಾಗೇಶ್ ಕಾಂಗ್ರೆಸ್ ಮುಖಂಡರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು ಈ ರೀತಿ ನಮಗೆ ಮೋಸ ಮಾಡುತ್ತಾರೆಂದು ಭಾವಿಸಿರಲಿಲ್ಲ. ಮುಖಂಡರ ಈ ವರ್ತನೆಯಿಂದ ಬಹಳ ಬೇಜಾರಾಗಿದೆ ಎಂದರು.
ಮತ ಎಣಿಕೆ ಕೇಂದ್ರದಿಂದ ನೇರವಾಗಿ ನನ್ನನ್ನು ಡಿ.ಕೆ.ಶಿವಕುಮಾರ್, ಬೆಂಗಳೂರಿಗೆ ಕರೆ ತಂದರು. 10 ದಿನಗಳ ಕಾಲ ನನ್ನನ್ನೂ ಜೊತೆಯಲ್ಲಿ ಇರಿಸಿಕೊಂಡಿದ್ದರು. ಆರಂಭದಿಂದಲೂ ನಾನು ಕಾಂಗ್ರೆಸ್ ಜೊತೆಯಲ್ಲಿದ್ದೆ. ಆದರೆ, ನನ್ನನ್ನು ನಿರ್ಲಕ್ಷಿಸಿ ಬಿಜೆಪಿಗೆ ಹೋಗಿ ಬಂದ ಶಂಕರ್ಗೆ ಸಚಿವ ಸ್ಥಾನ ನೀಡಿರುವುದು ಬೇಸರ ತಂದಿದೆ ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಳಿ ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದೇನೆ. ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮೂರ್ನಾಲ್ಕು ದಿನಗಳಲ್ಲಿ ನನ್ನ ಮುಂದಿನ ತೀರ್ಮಾನವನ್ನು ತಿಳಿಸುತ್ತೇನೆ ಎಂದು ನಾಗೇಶ್ ತಿಳಿಸಿದರು.