ಹನೂರು: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಹನೂರು,ಆ.12: ಪ್ರತಿಭಾ ಕಾರಂಜಿ ಕಾರ್ಯಕ್ರಮವು ಪ್ರಾಥಮಿಕ ಮತ್ತು ಪ್ರೌಡಶಾಲೆ ವಿದ್ಯಾರ್ಥಿಗಳಿಗಾಗಿ ಇಲಾಖೆ ಯೋಜನಾ ಕಾರ್ಯಕ್ರಮದಡಿಯಲ್ಲಿ ರೂಪಿಸಿದ ಕಾರ್ಯಕ್ರಮವಾಗಿದೆ. ಇದು ಮಕ್ಕಳ ವ್ಯಕ್ತಿತ್ವದ ಅಭಿವೃದ್ದಿಗೆ ಸಹಾಯವಾಗುತ್ತದೆ ಎಂದು ಬಿಆರ್ಪಿ ಆಶೋಕ್ ತಿಳಿಸಿದರು.
ಕ್ಷೇತ್ರ ವ್ಯಾಪ್ತಿಯ ನೆಲ್ಲೂರು ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕೂಡ್ಲೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಲು ಈ ಕಾರ್ಯಕ್ರಮ ಸೂಕ್ತ ವೇದಿಕೆ. ವಿದ್ಯಾರ್ಥಿಗಳ ವ್ಯಕ್ತಿತ್ವದ ಅಭಿವೃದ್ದಿಯ ಜೊತೆಗೆ ಕಲಿಕೆ ಮತ್ತು ಹೂಸದಾದ ಜೀವನ ಕೌಶಲ್ಯವನ್ನು ಹೊಂದುವ ಜೊತೆಗೆ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಿಕೂಳ್ಳಲು ಸಾಧ್ಯವಾಗಿ ಶೈಕ್ಷಣಿಕ ಹಾಗೂ ಪಠೇತ್ಯರ ಚಟುವಟಿಕೆಗಳಲ್ಲಿ ತೊಡಗಿಸಿಕೂಳ್ಳಲು ಅನುಕೂಲವಾಗುತ್ತದೆ. ಹಾಗೆಯೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಯಲ್ಲಿ ಶಿಕ್ಷಕರ ಜೊತೆಗೆ ಪೋಷಕರ ಜವಬ್ದಾರಿಯೂ ಪ್ರಮುಖವಾದದ್ದು ಎಂದರು.
ಈ ಸಂದರ್ಭ 2017-18ಸಾಲಿನ ಎಸೆಸೆಲ್ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಮತ್ತು ವಲಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಬಹುಮಾನವನ್ನು ನೀಡಲಾಯಿತು.
ಈ ಸಮಾರಂಭದಲ್ಲಿ ಸುಮತಿ, ಗ್ರಾಪಂ ಸದಸ್ಯ ಪೂಂಗಡಿ, ಎಸ್ಡಿಎಂಸಿ ಅಧ್ಯಕ್ಷ ಕನಕರಾಜು ಬಿಆರ್ಪಿ ಶ್ರೀನಿವಾಸ್ನಾಯ್ಡು, ಶಿವಕುಮಾರಿ, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಸಿಆರ್ಪಿಗಳಾದ ಗುರುಪ್ರಸಾದ್, ಮಹದೇವಪ್ರಸಾದ್ ಇನ್ನಿತರರು ಹಾಜರಿದ್ದರು.