ಮಂಡ್ಯ: ಎಸ್ಬಿಐನಿಂದ 15 ಲಕ್ಷ ರೂ. ಕಳವು
ಮಂಡ್ಯ, ಆ.20: ಬ್ಯಾಂಕ್ ಸಿಬ್ಬಂದಿ ಗಮನ ಬೇರೆಡೆ ಸೆಳೆದು 15 ಲಕ್ಷ ರೂ. ಎಗರಿಸಿ ಪರಾರಿಯಾಗಿರುವ ಘಟನೆ ನಗರದ ಬಂದೀಗೌಡ ಬಡಾವಣೆಯ ಭಾರತೀಯ ಸ್ಟೇಟ್ ಬ್ಯಾಂಕ್ನ ಶಾಖೆಯಲ್ಲಿ ಸೋಮವಾರ ನಡೆದಿದೆ.
ಬೆಳಗ್ಗೆ 10.30ರ ಸುಮಾರಿಗೆ ದಿನದ ವಹಿವಾಟಿಗೆಂದು 43 ಲಕ್ಷ ರೂ. ನಗದು ತಂದು ನಗದು ಕೌಂಟರ್ ನಲ್ಲಿ ಇಡಲಾಗಿದೆ. ಕೆಲ ಸಮಯದ ನಂತರ ನೋಡಿದಾಗ 28 ಲಕ್ಷ ರೂ. ಮಾತ್ರ ಇರುವುದು ಗಮನಕ್ಕೆ ಬಂದಿದೆ. 500 ಮುಖ ಬೆಲೆಯ 15 ಲಕ್ಷ ರೂ. ಹಣ ಕಳ್ಳತನವಾಗಿರುವುದು ಗೊತ್ತಾಗಿದೆ ಎನ್ನಲಾಗಿದೆ.
ಕೂಡಲೇ ಬ್ಯಾಂಕ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಹೆಚ್ವುವರಿ ಜಿಲ್ಲಾ ಪೊಲಿಸ್ ವರಿಷ್ಠಧಿಕಾರಿ ಲಾವಣ್ಯ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ಶ್ವಾನದಳ, ಬೆರಳಚ್ಚು ತಜ್ಞರೂ ಪರಿಶೀಲನೆ ನಡೆಸಿದರು.
ಟೋಪಿ ಧರಿಸಿ ವ್ಯಕ್ತಿಯೊಬ್ಬ ಬ್ಯಾಂಕ್ ಮುಖ್ಯದ್ವಾರದಿಂದ ಹೊರ ಹೋಗಿದ್ದು, ಆತನ ಜೊತೆ 15 ಜನ ಹೊರ ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅವರು ಹಿಂದಿ ಭಾಷೆ ಮಾತನಾಡುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆದು, ಶಂಕಿತ ವ್ಯಕ್ತಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಬ್ಯಾಂಕ್ನ ಮುಖ್ಯ ವ್ಯವಸ್ಥಾಪಕ ಬಿ.ಸದಾನಂದ ಕಾಮತ್ ನಗರದ ಪಶ್ಚಿಮ ಠಾಣೆಗೆ ದೂರು ಸಲ್ಲಿಸಿದ್ದಾರೆ.