ಸಾಹಿತ್ಯ ಸಮ್ಮೇಳನಕ್ಕೆ ಸಿಂಗಾರಗೊಂಡ ಧಾರವಾಡ
ಧಾರವಾಡ, ಡಿ.31: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಧಾರವಾಡ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ನಾಡಿನ ಸಮಸ್ತ ಜನತೆಯನ್ನು ಕೈ ಬೀಸಿ ಕರೆಯುತ್ತಿದೆ.ಸುಮಾರು 60 ವರ್ಷಗಳ ನಂತರ ಧಾರವಾಡ ನಗರದಲ್ಲಿ ಡಿ.4ರಿಂದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ರಾಜ್ಯ, ಹೊರರಾಜ್ಯ ಸೇರಿ ರಾಷ್ಟ್ರದ ಲಕ್ಷಾಂತರ ಸಾಹಿತಿಗಳು, ಸಾಹಿತ್ಯ ಆರಾಧಕರು ಆಗಮಿಸುವ ನಿರೀಕ್ಷೆಯಿದೆ.
ಹೀಗಾಗಿ ಸ್ವಯಂಸೇವಕರು, ಪ್ರೀತಿ, ವಿಶ್ವಾಸದಿಂದ ಸಾಹಿತ್ಯ ಪ್ರೇಮಿಗಳನ್ನು ಬರಮಾಡಿಕೊಳ್ಳಲು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾರೆ. ನಗರದ ಪ್ರಮುಖ ರಸ್ತೆಗಳ ಬದಿಯ ಸರಕಾರಿ ಕಚೇರಿ ಗೋಡೆ, ಕಾಂಪೌಂಡ್ಗಳ ಮೇಲೆ ಅಕ್ಷರ ಜಾತ್ರೆಯ ಚಿತ್ತಾರ ಮೂಡಿಸುವ ಮೂಲಕ ಸಮ್ಮೇಳನಕ್ಕೆ ಸಾಕಷ್ಟು ಮೆರಗು ತರಲಾಗುತ್ತಿದೆ.
ಆಲೂರು ವೆಂಕಟರಾವ್ ವೃತ್ತದಲ್ಲಿ ಬಟ್ಟೆಯಿಂದ ಮಾಡಿದ ಕನ್ನಡ ಬಾವುಟಗಳನ್ನು ಕಟ್ಟಲಾಗುತ್ತಿದ್ದು, ಇಡೀ ವೃತ್ತ ಕೆಂಪು ಮತ್ತು ಹಳದಿ ಬಣ್ಣದಿಂದ ರಂಗೇರಲಿದೆ, ಡಯಟ್ ಆವರಣದ ಕಾಂಪೌಂಡ್ ಮೇಲೆ ಶಿಕ್ಷಕರು ಬಣ್ಣ-ಬಣ್ಣದ ಚಿತ್ತಾರ ಬಿಡಿಸಲು ಆರಂಭಿಸಿದ್ದು ನೋಡುಗರಿಗೆ ಕಣ್ಮನ ಸೆಳೆಯುತ್ತಿದೆ. ಇನ್ನು ಕೆಲ ಗೋಡೆಗಳ ಮೇಲೆ ಅನ್ನಭಾಗ್ಯ, ಕ್ಷೀರಭಾಗ್ಯ, ಸೈಕಲ್ ವಿತರಣೆ, ಕಲೋತ್ಸವ, ಪ್ರತಿಭಾ ಕಾರಂಜಿ, ಶಾಲಾ ಮಕ್ಕಳಿಗೆ ಬಿಸಿಯೂಟ ವಿತರಣೆ ಸೇರಿದಂತೆ 35ಕ್ಕೂ ಹೆಚ್ಚು ಸರಕಾರಿ ಯೋಜನೆಗಳನ್ನು ಚಿತ್ರಗಳ ಮೂಲಕ ಅನಾವರಣಗೊಳಿಸಲಾಗುತ್ತಿದೆ.
ಕರ್ನಾಟಕ ಕಾಲೇಜಿನ ಮುಖ್ಯದ್ವಾರದಿಂದ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಆರಂಭವಾಗಲಿದ್ದು, ಕಾಲೇಜು ರಸ್ತೆಯಲ್ಲಿರುವ ಕಲಾಕೃತಿಗಳಿಗೆ ಹುಬ್ಬಳ್ಳಿಯ ‘ಕಲರ್ ಮೈ ಸಿಟಿ’ ಸಂಘಟನೆ ವತಿಯಿಂದ ಬಣ್ಣ ಹಚ್ಚಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಕಾಲೇಜಿನ ಆವರಣದಲ್ಲಿರುವ ಸುತ್ತ ಗೋಡೆಗಳ ಮೇಲೆ ಯಕ್ಷಗಾನ, ಸಾಹಿತ್ಯ ಹಾಗೂ ಐತಿಹಾಸಿಕ ಕಲಾಕೃತಿಗಳ ಅನಾವರಣ ಮಾಡುತ್ತಿರುವುದು ವಿಶೇಷವಾಗಿದೆ.
ವಸತಿ ವ್ಯವಸ್ಥೆ
ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ, ಅತಿಥಿಗಳಿಗೆ ಹಾಗೂ ನೋಂದಾಯಿತ ಸದಸ್ಯರಿಗೆ ಸೂಕ್ತ ವಸತಿ ಹಾಗೂ ಸಾರಿಗೆ ವ್ಯವಸ್ಥೆ ಒದಗಿಸಲು ಜಿಲ್ಲಾಡಳಿತದ ನಿರ್ದೇಶನದಂತೆ ವಸತಿ ಮತ್ತು ಸಾರಿಗೆ ಸಮಿತಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ನಾಡಿನ ವಿವಿಧ ಜಿಲ್ಲೆಗಳಿಂದ 620 ಅತಿಥಿ ಗಣ್ಯರು, 1000 ವಿಶೇಷ ಆಹ್ವಾನಿತರು, 400 ಕಾರ್ಯಕಾರಿ ಸಮಿತಿ ಸದಸ್ಯರು, 17,000 ನೋಂದಾಯಿತ ಪ್ರತಿನಿಧಿಗಳು, 50 ಕ್ಕೂ ಹೆಚ್ಚು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಪದಾಧಿಕಾರಿಗಳು, ಸಿಬ್ಬಂದಿ ಸೇರಿದಂತೆ 18,000 ಜನರು ಆಗಮಿಸಲಿದ್ದು ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ.