"ಪ್ರಧಾನಿ ನರೇಂದ್ರ ಮೋದಿಯನ್ನೂ ನೀವು ಗುಂಡಿಟ್ಟು ಕೊಲ್ಲುತ್ತೀರಾ?"
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ
ಬೆಂಗಳೂರು, ಫೆ.4: ಹಿಂದೂ ಯುವತಿಯರನ್ನು ಮುಟ್ಟಿದವರ ಕೈ ಕಡಿಯಬೇಕು ಎನ್ನುತ್ತಾರೆ ಅನಂತಕುಮಾರ್ ಹೆಗಡೆ. ಆದರೆ, ಬಿಜೆಪಿ ಸರಕಾರದಲ್ಲಿ ಸಚಿವನೋರ್ವ ಅತ್ಯಾಚಾರ ಮಾಡಿದ್ದ. ಇನ್ನೂ ಕೆಲ ಸಚಿವರು ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದರು. ಅಷ್ಟೇ ಅಲ್ಲದೆ, ಬಿಜೆಪಿ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರು ಪಬ್ ದಾಳಿಯಲ್ಲಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿದರು. ಇದುವರೆಗೂ ಅನಂತಕುಮಾರ್ ಎಷ್ಟು ಜನರ ಕೈ ಕತ್ತರಿಸಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನೆ ಮಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮ ದಿನದಂದು ಹಿಂದೂ ಮಹಾಸಭಾದ ನಾಯಕಿ ಪೂಜಾ ಶಕುನ್ ಪಾಂಡೆ, ಪಿಸ್ತೂಲಿನಿಂದ ಗುಂಡು ಹಾರಿಸಿ ಸಂಭ್ರಮಿಸಿದ ಹೇಯ ಕೃತ್ಯ ಖಂಡಿಸಿ ಸೋಮವಾರ ನಗರದಲ್ಲಿ ಕಾಂಗ್ರೆಸ್ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವರಾಗಿ ಜವಾಬ್ದಾರಿ ಮರೆತು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ನಮಗೂ ನಿಮಗಿಂತ ಕೆಟ್ಟದಾಗಿ ಮಾತನಾಡುವುದು ಗೊತ್ತಿದೆ. ದಿನೇಶ್ ಗುಂಡೂರಾವ್ ಅವರ ಮದುವೆ ವಿಷಯವನ್ನು ಪ್ರಶ್ನೆ ಮಾಡುವ ನೀವು, ನಿಮ್ಮ ಪತ್ನಿ ಯಾವ ಜಾತಿಗೆ ಸೇರಿದ್ದು ಎಂದು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಮಾಡಿಸುತ್ತೀರ ಎಂದು ಪ್ರಶ್ನಿಸಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಅನಂತಕುಮಾರ್ ಹೆಗಡೆ ಅವರು, ಹೀಗೆಯೇ ವಿವಾದಿತ ಹೇಳಿಕೆಗಳನ್ನು ಮುಂದುವರೆಸಿದರೆ, ಅವರ ಬಾಯಿಗೆ ಹುಳ ಬೀಳುತ್ತದೆ. ಅಷ್ಟೇ ಅಲ್ಲದೆ, ಇನ್ನು ಮುಂದೆ ನಾವು ಕೂಡ ಅವರಂತೆ ಬಾಯಿಗೆ ಬಂದಂತೆ ಮಾತನಾಡಿ ಉತ್ತರ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಮೋದಿಗೂ ಗುಂಡಿಟ್ಟು ಕೊಲ್ಲುತ್ತೀರಾ?
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಟ್ಟು ಕೊಂದ ಪ್ರಕರಣದ ಮರುಸೃಷ್ಟಿ ಮಾಡಿ ಸಂಘ ಪರಿವಾರದವರು ಅಣಕು ಪ್ರದರ್ಶನ ಮಾಡುತ್ತಾರೆ. ಆದರೆ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿ ಈಡೇರಿಸದೆ ಇರುವ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನೀವು ಗುಂಡಿಟ್ಟು ಕೊಲ್ಲುತ್ತೀರಾ?
-ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ