ಲಂಚಕ್ಕೆ ಬೇಡಿಕೆ ಆರೋಪ: ಕಂದಾಯ ಅಧಿಕಾರಿಗೆ ಕಾರಾಗೃಹ ಶಿಕ್ಷೆ
ಶಿವಮೊಗ್ಗ, ಫೆ. 13: ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಗೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಲಯವು ಕಾರಾಗೃಹ ವಾಸ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ನಾರಾಯಣವಪ್ಪ ಶಿಕ್ಷೆಗೊಳಗಾದ ರೆವಿನ್ಯೂ ಇನ್ಸ್ಪೆಕ್ಟರ್ ಎಂದು ಗುರುತಿಸಲಾಗಿದೆ. ನ್ಯಾಯಾಲಯದ ವಿಚಾರಣೆಯಲ್ಲಿ ಇವರ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಪ್ರಭಾವತಿ ಎಂ. ಹಿರೇಮಠರವರು 1 ವರ್ಷ 6 ತಿಂಗಳ ಸಾದಾ ಸಜೆ ಹಾಗೂ 55,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಗೀತಾ ಶಿವಮೂರ್ತಿಯವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ತಮ್ಮ ಪಹಣಿ ಹಾಗೂ ಆಸ್ತಿ ಜಮೀನಿನ ಖಾತೆ ಪತ್ರಗಳನ್ನು ಮಾಡಿಕೊಡುವಂತೆ ಶಿವಮೊಗ್ಗ ತಾಲೂಕಿನ ನಿವಾಸಿ ಅಣ್ಣಪ್ಪ ಎಂಬುವವರು ರೆವಿನ್ಯೂ ಇನ್ಸ್ಪೆಕ್ಟರ್ ನಾರಾಯಣಪ್ಪರಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ನಾರಾಯಣಪ್ಪರವರು 5,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅಣ್ಣಪ್ಪರವರು ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಸಮಿವುಲ್ಲಾ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.