ಲೋಕಸಭೆ ಫಲಿತಾಂಶದಿಂದ ಮೈತ್ರಿ ಸರಕಾರದ ಮೇಲೆ ಪರಿಣಾಮ ಇಲ್ಲ: ರೇವಣ್ಣ
ಬೆಂಗಳೂರು, ಮೇ 25: ಲೋಕಸಭೆ ಫಲಿತಾಂಶದಿಂದ ರಾಜ್ಯ ಮೈತ್ರಿ ಸರಕಾರಕ್ಕೆ ಏನೂ ಪರಿಣಾಮ ಬೀರುವುದಿಲ್ಲ. ನಮ್ಮ ಸರಕಾರ ಸುಭದ್ರವಾಗಿದೆ ಎಂದು ಸಚಿವ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮೈತ್ರಿ ಸರಕಾರದ ಮುಂದಿನ ನಡೆಯ ಕುರಿತು ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ನಾಯಕರು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂದು ಹೇಳಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೆ ಬದಲಾವಣೆಯಾಗುವುದಿಲ್ಲವೆಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಹಾಸನ ಲೋಕಸಭೆಯು ದೇವೇಗೌಡರು 60 ವರ್ಷ ಪ್ರತಿನಿಧಿಸಿದ್ದ ಕ್ಷೇತ್ರವಾಗಿದೆ. ಅದನ್ನು ಪ್ರಜ್ವಲ್ಗೆ ಬಿಟ್ಟುಕೊಟ್ಟು ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. ತಾತನ ಸೋಲಿನಿಂದಾಗಿ ಪ್ರಜ್ವಲ್ಗೆ ಸಹಜವಾಗಿ ನೋವಾಗಿದೆ. ಹೀಗಾಗಿ ರಾಜೀನಾಮೆ ವಿಚಾರದ ಕುರಿತು ಮಾತನಾಡಿದ್ದಾರಷ್ಟೆ ಎಂದರು.