ವಿಶ್ವಾಸಮತ: ಮೈತ್ರಿ ಸರಕಾರದ ಪರ ನಿಲ್ಲುವಂತೆ ಬಿಎಸ್ಪಿ ಶಾಸಕ ಎನ್.ಮಹೇಶ್ಗೆ ಮಾಯಾವತಿ ಸೂಚನೆ
ಲಕ್ನೋ, ಜು.21: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ಅಲ್ಪಮತಕ್ಕೆ ಕುಸಿದಿರುವ ತಮ್ಮ ಸರ್ಕಾರದ ಪರವಾಗಿ ವಿಶ್ವಾಸಮತ ಯಾಚಿಸುತ್ತಿರುವ ಕರ್ನಾಟಕ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ನಿಲ್ಲುವಂತೆ ರಾಜ್ಯದ ಏಕೈಕ ಬಿಎಸ್ಪಿ ಶಾಸಕ ಎನ್. ಮಹೇಶ್ಗೆ ಬಿಎಸ್ಪಿ ನಾಯಕಿ ಮಾಯಾವತಿ ಸೂಚಿಸಿದ್ದಾರೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಅವರು, ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸುವಂತೆ ಎನ್.ಮಹೇಶ್ಗೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಇದಕ್ಕೂ ಮುನ್ನ, ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತಿದ್ದು, ಚರ್ಚೆಗಳೆಲ್ಲ ಮುಗಿದ ನಂತರದಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಮತ ವಿಭಜನೆಗೆ ಹಾಕಿದಾಗ ತಾವು ಕಲಾಪಕ್ಕೆ ಗೈರುಹಾಜರಾಗುವುದಾಗಿ ಎನ್.ಮಹೇಶ್ ಹೇಳಿದ್ದರು. ಸರ್ಕಾರವನ್ನು ಬೆಂಬಲಿಸಬೇಕೆ, ಬೇಡವೇ ಎಂಬ ಬಗ್ಗೆ ಪಕ್ಷದ ಮುಖಂಡರಿಂದ ತಮಗೆ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಇದರಿಂದ ದೋಸ್ತಿ ಸರ್ಕಾರ ಚಿಂತೆಗೀಡಾಗಿದ್ದರೆ, ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿತ್ತು.