ಅಕ್ಟೋಬರ್ನಲ್ಲಿ ರಾಜ್ಯಾದ್ಯಂತ ವನ್ಯಜೀವಿ ಸಪ್ತಾಹ
ಬೆಂಗಳೂರು, ಸೆ.15: ಕರ್ನಾಟಕ ಅರಣ್ಯ ಇಲಾಖೆಯು ವನ್ಯಜೀವಿ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 65 ನೆ ವಜ್ಯಜೀವಿ ಸಪ್ತಾಹವನ್ನು ಅಕ್ಟೋಬರ್ ಮೊದಲನೆ ವಾರದಿಂದ ರಾಜ್ಯಾದ್ಯಂತ ಆಚರಿಸಲಾಗುತ್ತದೆ.
ವನ್ಯಜೀವಿ ಸಪ್ತಾಹದ ಅಂಗವಾಗಿ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಸೇರಿದಂತೆ ಮತ್ತಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕರ್ನಾಟಕ ಹುಲ್ಲುಗಾವಲುಗಳ ರಕ್ಷಣೆಗಾಗಿ ಪಣ ತೊಟ್ಟಿರುವ ಇಲಾಖೆಯು ಪರಿಸರ ವ್ಯವಸ್ಥೆ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಧ ಏರ್ಪಡಿಸಲಾಗಿದೆ.
ಅ.2 ರಂದು ವನ್ಯಜೀವಿಗಾಗಿ ನಡೆ ಕಾರ್ಯಕ್ರಮ ಹೈಕೋರ್ಟ್ ದ್ವಾರದಿಂದ ಲಾಲ್ಬಾಗ್ವರೆಗೂ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗ್ಗೆ 7.30 ಕ್ಕೆ ಚಾಲನೆ ನೀಡಲಿದ್ದು, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಅಲ್ಲದೆ, 2019-20 ನೆ ಸಾಲಿನ ವಜ್ಯಜೀವಿ ಸಪ್ತಾಹದ ಅಂಗವಾಗಿ ಗಿಡ ನೆಡುವ, ಪ್ಲಾಸ್ಟಿಕ್ ನಿರ್ಮೂಲನೆ, ವಜ್ಯಜೀವಿ ಚಿತ್ರ ಪ್ರದರ್ಶನ, ವನ್ಯಜೀವಿ ಕಥೆ ಹೇಳುವ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಹಾಗೂ ಶಾಲಾ ಮಕ್ಕಳಿಗೆ ಅ.2 ರಿಂದ 9 ರವರೆಗೆ ನಡೆಯಲಿದೆ. ಅ.9 ರಂದು ಸಮಾರೋಪ ಸಮಾರಂಭವನ್ನು ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಪಾಲ್ಗೊಂಡು ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.