ಮನ್ಮುಲ್ ಚುಕ್ಕಾಣಿ ಜೆಡಿಎಸ್ ಪಾಲು: ಬಿಜೆಪಿಗೆ ಮುಖಭಂಗ
ರಾಮಚಂದ್ರ-ರಘುನಂದನ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ
ಮಂಡ್ಯ, ಅ.3: ಮಂಡ್ಯ ಹಾಲು ಒಕ್ಕೂಟ(ಮನ್ಮುಲ್)ದ ಚುಕ್ಕಾಣಿ ಜೆಡಿಎಸ್ ಪಾಲಾಗಿದ್ದು, ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.
ಗುರುವಾರ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಮತ ಎಣಿಕೆ ನಡೆದು, ಸಮಬಲ ಬಂದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಜೆಡಿಎಸ್ ಗೆಲುವು ಸಾಧಿಸಿದೆ.
ಒಟ್ಟು 16 ಮತಗಳ ಪೈಕಿ ಜೆಡಿಎಸ್ನ ರಾಮಚಂದ್ರ ಮತ್ತು ಬಿಜೆಪಿಯ ಎಸ್.ಪಿ.ಸ್ವಾಮಿಗೆ ತಲಾ 8 ಮತಗಳು ಲಭಿಸಿದ್ದವು. ಲಾಟರಿ ಎತ್ತಿದಾಗ ರಾಮಚಂದ್ರ ಗೆಲುವು ಪಡೆದರು.
ಒಕ್ಕೂಟದ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ 8, ಕಾಂಗ್ರೆಸ್ 3, ಬಿಜೆಪಿ ಒಂದು ಸ್ಥಾನ ಪಡೆದಿದ್ದವು. ಜೆಡಿಎಸ್ಗೆ ಒಕ್ಕೂಟದ ಚುಕ್ಕಾಣಿ ತಪ್ಪಿಸಲು ಬಿಜೆಪಿ ರಣತಂತ್ರ ರೂಪಿಸಿತ್ತು.
ಜೆಡಿಎಸ್ನ ಎಸ್.ಪಿ.ಸ್ವಾಮಿಯನ್ನು ತನ್ನ ಪಕ್ಷಕ್ಕೆ ಸೆಳೆದುಕೊಂಡಿದ್ದ ಬಿಜೆಪಿ ತನ್ನ ಓರ್ವ ಸದಸ್ಯೆ, ನಾಮನಿರ್ದೇಶಿತ ಸದಸ್ಯ, ಮೂವರು ಅಧಿಕಾರಿಗಳ ಹಾಗು ಕಾಂಗ್ರೆಸ್ ಮೂವರ ಮತ ಪಡೆದು ಒಕ್ಕೂಟದ ಗದ್ದುಗೆಗೇರಲು ತಂತ್ರ ಎಣೆದಿತ್ತು.
ಬಿಜೆಪಿಯಿಂದ ಎಸ್.ಪಿ.ಸ್ವಾಮಿ ಮತ್ತು ಜೆಡಿಎಸ್ನಿಂದ ರಾಮಚಂದ್ರ ಅಧ್ಯಕ್ಷ ಚುನಾವಣೆಗೆ ಅಭ್ಯರ್ಥಿಯಾಗಿದ್ದರು. ಈ ನಡುವೆ ಜೆಡಿಎಸ್ನ ಇಬ್ಬರು ನಿರ್ದೇಶಕರ ಆಯ್ಕೆಯನ್ನು ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಅನೂರ್ಜಿತಗೊಳಿಸಿದ್ದರು.
ತಮ್ಮ ಆಯ್ಕೆ ಅನೂರ್ಜಿತಗೊಳಿಸಿದ ಕ್ರಮ ಪ್ರಶ್ನಿಸಿ ಜೆಡಿಎಸ್ನ ಇಬ್ಬರು ನಿರ್ದೇಶಕರು ಕೋರ್ಟ್ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಚುನಾವಣೆಯ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು.
ಜೆಡಿಎಸ್ನ ನಿರ್ದೇಶಕರ ಆಯ್ಕೆಯನ್ನು ಕೋರ್ಟ್ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಗುರುವಾರ ಒಕ್ಕೂಟದ ಕಚೇರಿ ಸಭಾಂಗಣದಲ್ಲಿ ಚುನಾವಣೆ ನಡೆದು, ಲಾಟರಿ ಮೂಲಕ ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಆಯ್ಕೆಯಾದರು.
ಒಕ್ಕೂಟದ ಉಪಾಧ್ಯಕ್ಷ ಸ್ಥಾನವೂ ಜೆಡಿಎಸ್ಗೆ ಒಲಿದಿದ್ದು, 9 ಮತ ಪಡೆದ ಜೆಡಿಎಸ್ ರಘುನಂದನ್ ಉಪಾಧ್ಯಕ್ಷರಾಗಿ ಜಯಗಳಿಸಿದ್ದಾರೆ.