ಮೂತ್ರಪಿಂಡದಿಂದ 800 ಗ್ರಾಂ ಕಲ್ಲು ಹೊರತೆಗೆದ ವಿರಾಜಪೇಟೆ ವೈದ್ಯರ ತಂಡ
ಮಡಿಕೇರಿ, ಅ.23 : ಯುವಕನೊಬ್ಬನ ಮೂತ್ರಪಿಂಡದಿಂದ 800 ಗ್ರಾಂ ತೂಕದ ಕಲ್ಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕು ಕಡಂಗ ಗ್ರಾಮದ ನಿವಾಸಿ ಇಬ್ರಾಹಿಂ ಅವರ ಪುತ್ರ ರಫೀಕ್ (37) ಎಂಬವರು ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಅ.15ರಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು.
ರಫೀಕ್ರನ್ನು ಪರೀಕ್ಷೆಗೆ ಒಳಪಡಿಸಿದ ವೈದ್ಯರು ಮೂತ್ರಪಿಂಡದಲ್ಲಿ ಕಲ್ಲು ಇರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಸರ್ಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸಕರಾದ ಡಾ.ವಿಶ್ವನಾಥ್ ಸಿಂಪಿ ಮತ್ತು ಅರಿವಳಿಕೆ ತಜ್ಞರಾದ ಡಾ.ಸುರೇಶ್ ಅವರು ಮತ್ತು ಸಿಬ್ಬಂದಿಗಳು ಒಂದು ಗಂಟೆ ಅವಧಿಯ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಮೂತ್ರ ಪಿಂಡದಿಂದ ಭಾರೀ ಗಾತ್ರದ ಕಲ್ಲನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಖ್ಯ ಶಸ್ತ್ರ ಚಿಕಿತ್ಸಕರಾದ ಡಾ. ವಿಶ್ವನಾಥ್ ಸಿಂಪಿ ಮಾತನಾಡಿ, ಇಂತಹ ಘಟನೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪ ಮತ್ತು ವಿರಳ. ಶಸ್ತ್ರಚಿಕಿತ್ಸೆಯಿಂದ ಮೂತ್ರಪಿಂಡದ ಕಲ್ಲನ್ನು ಹೊರ ತೆಗೆಯಲಾಗಿದ್ದು, ರೋಗಿ ಗುಣಮುಖನಾಗಿದ್ದಾನೆ ಎಂದು ತಿಳಿಸಿದರು.