ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಮಂಡ್ಯ, ನ.11: ಕೆ.ಆರ್.ಪೇಟೆ ತಾಲೂಕಿನ ದೊಡ್ಡಸೋಮನಹಳ್ಳಿ ಗ್ರಾಮದ ರೈತ ಭದ್ರೇಗೌಡ(45) ಸಾಲಬಾಧೆ ತಾಳಲಾರದೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭದ್ರೇಗೌಡ ಅವರು ಅಘಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಒಂದೂವರೆ ಲಕ್ಷ ಬೆಳೆ ಸಾಲ ಹಾಗೂ ಅಘಲಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 80 ಸಾವಿರ ಸಾಲ ಜೊತೆಗೆ ಹಾಗೂ 2 ಲಕ್ಷ ಕೈಸಾಲ ಮಾಡಿದ್ದರು ಎನ್ನಲಾಗಿದೆ.
ಎರಡೂವರೆ ಎಕರೆ ಜಮೀನಿನಲ್ಲಿ ಬೆಳೆಗಾಗಿ ಸುಮಾರು 3 ಕೊಳವೆ ಬಾವಿ ಕೊರೆಸಿದ್ದರು. ನೀರು ಸರಿಯಾಗಿ ಬಾರದೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಬೆಳೆದಿದ್ದ ರಾಗಿ ಒಣಗಿತ್ತು. ಇದರಿಂದ ಮನನೊಂದು ಜಮೀನಿನಲ್ಲಿ ಇರುವ ಕೃಷಿ ಪಂಪ್ ಸೆಟ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಪತ್ನಿ ಮಮತಾ ಕೆ.ಆರ್.ಪೇಟೆ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಮೃತ ರೈತನಿಗೆ ವೃದ್ದ ತಾಯಿ, ಇಬ್ಬರು ಮಕ್ಕಳಿದ್ದಾರೆ. ಕೆ.ಆರ್.ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಘಲಯ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ, ಅಘಲಯ ಸೊಸೈಟಿ ಅಧ್ಯಕ್ಷ ಹೋಬಳಿ ಕುಮಾರ್, ಡಿ.ಎಸ್.ನಾಗೇಂದ್ರ ಮತ್ತಿತರರು ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.